ADVERTISEMENT

ಕೋವಿಡ್ ಕರ್ತವ್ಯ ನಿರತ ಪ್ರೊಬೇಷನರಿ ಎ.ಸಿ ಸಾವು

ಇತ್ತೀಚೆಗಷ್ಟೇ ಸರ್ಕಾರಿ ಕೆಲಸಕ್ಕೆ ಸೇರಿದ್ದ ಮಾಜಿ ಸೈನಿಕ ಗಂಗಾಧರಯ್ಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 20:52 IST
Last Updated 8 ಆಗಸ್ಟ್ 2020, 20:52 IST
ಎಚ್‌.ಎಂ.ಗಂಗಾಧರಯ್ಯ
ಎಚ್‌.ಎಂ.ಗಂಗಾಧರಯ್ಯ   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರದ ನೋಡಲ್‌ ಅಧಿಕಾರಿಯಾಗಿದ್ದ ಪ್ರೊಬೇಷನರಿ ಉಪವಿಭಾಗಾಧಿಕಾರಿ ಎಚ್‌.ಎಂ.ಗಂಗಾಧರಯ್ಯ (45) ಅವರು ಹೃದಯಾಘಾತದಿಂದಾಗಿ ಶನಿವಾರ ಮೃತಪಟ್ಟರು.

ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕಿನ ಡಿ.ಹೊಸಹಳ್ಳಿ ಗ್ರಾಮದವರು.

ಕೋವಿಡ್ ಇರಲಿಲ್ಲ: ‘ಅವರು ಮಾಜಿ ಸೈನಿಕರ ಕೋಟದಲ್ಲಿ ಇತ್ತೀಚೆಗಷ್ಟೇ ಉಪವಿಭಾಗಾಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿದ್ದರು. ಅವರನ್ನು ಬಿಐಇಸಿ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರಿಗೆ ಸಂಜೆ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅವರಿಗೆ ಕೋವಿಡ್‌ ಇರಲಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗಂಗಾಧರಯ್ಯ ಅವರ ಸಾವಿಗೆ ಮುಖ್ಯಮಂತ್ರಿ ಬಿ..ಎಸ್‌.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ‘ದಕ್ಷ ಅಧಿಕಾರಿಯಾಗಿದ್ದ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ’ ಎಂದು ಈ ಕುರಿತುಅವರು ಟ್ವೀಟ್‌ ಮಾಡಿದ್ದಾರೆ.

₹ 25 ಲಕ್ಷ ಪರಿಹಾರ ಘೋಷಣೆ:

‘ಗಂಗಾಧರಯ್ಯ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 25 ಲಕ್ಷ ಪರಿಹಾರ ನೀಡಲಾಗುತ್ತದೆ. ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುತ್ತದೆ. ಅವರ ಅಂತ್ಯಕ್ರಿಯೆಯಯನ್ನು ಪೊಲೀಸ್‌ ಗೌರವದೊಂದಿಗೆ ನಡೆಸಲಾಗುತ್ತದೆ' ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.