ಬೆಂಗಳೂರು: 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಕೆಲ ಅಭ್ಯರ್ಥಿಗಳು, ಒಎಂಆರ್ (ಆಪ್ಟಿಕಲ್ ಮಾರ್ಕ್ಸ್ ರೆಕಗ್ನಿಷನ್) ಕಾರ್ಬನ್ ಪ್ರತಿಯನ್ನೂ ತಿದ್ದಿ ಸಿಐಡಿ ಅಧಿಕಾರಿಗಳ ದಿಕ್ಕು ತಪ್ಪಿಸಲು ಯತ್ನಿಸಿರುವುದಾಗಿ ಗೊತ್ತಾಗಿದೆ.
ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದ ಕೆಲ ಅಭ್ಯರ್ಥಿಗಳ ಕಾರ್ಬನ್ ಪ್ರತಿ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, ನೈಜತೆ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಒಎಂಆರ್ ಅಸಲಿ ಪ್ರತಿ ತಿದ್ದಿ ಹಾಗೂ ‘ಬ್ಲೂ ಟೂತ್’ ಎಲೆಕ್ಟ್ರಾನಿಕ್ ಉಪಕರಣ ಬಳಸಿ ಅಕ್ರಮ ಎಸಗಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಗುರುವಾರ 350 ಅಭ್ಯರ್ಥಿಗಳ ವಿಚಾರಣೆ ಪೂರ್ಣಗೊಳಿಸಿದ್ದಾರೆ. ಉಳಿದ ಕೆಲವು ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದು ಶುಕ್ರವಾರವೂ ವಿಚಾರಣೆ ಮುಂದುವರಿಯಲಿದೆ.
‘ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ಹಾಗೂ ಒಎಂಆರ್ ಕಾರ್ಬನ್ ಪ್ರತಿಗ
ಳನ್ನು ಸಿಐಡಿ ವಿಶೇಷ ತಂಡಗಳು ಸಂಗ್ರಹಿಸಿವೆ. ಕೆಲ ಪ್ರಶ್ನೆಗಳಿಗೆ ಅಭ್ಯರ್ಥಿಗಳ ಹೇಳಿಕೆ ಸಹ ಪಡೆದಿವೆ. ಕಾರ್ಬನ್ ಪ್ರತಿಗಳ ಬಗ್ಗೆ ಮತ್ತಷ್ಟು ತಾಂತ್ರಿಕ ಮಾಹಿತಿ ಅಗತ್ಯವಿದೆ. ಹೀಗಾಗಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷೆ ವರದಿ ಬಂದರ ನಂತರ ಮುಂದಿನ ಕ್ರಮ’ ಎಂದು ಸಿಐಡಿ ಮೂಲಗಳು ಹೇಳಿವೆ.
ಭಯದಿಂದ ತಿದ್ದುಪಡಿ: ‘ಬಂಧನ ಭೀತಿಯಿಂದ ಕೆಲವರು, ತಮ್ಮ ಬಳಿ ಇರುವ ಕಾರ್ಬನ್ ಪ್ರತಿಯನ್ನು ಅಸಲಿ ಪ್ರತಿ ರೀತಿಯಲ್ಲೇ ತಿದ್ದುಪಡಿ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಂಥ ಕಾರ್ಬನ್ ಪ್ರತಿಗಳನ್ನೇ ಕೆಲವರು ವಿಚಾರಣೆ ವೇಳೆ ಹಾಜರುಪಡಿಸಿದ್ದಾರೆ. ಪರಿಶೀಲನೆ ವೇಳೆ ಉತ್ತರ ಗುರುತುಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಇದು ಸಾಕ್ಷ್ಯ ನಾಶದ ಕೃತ್ಯವಾಗುತ್ತದೆ’ ಎಂದೂ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.