ADVERTISEMENT

‍‍ಪಿಎಸ್‌ಐ ಹಗರಣ: ನಾಲ್ವರ ಜಾಮೀನು ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 19:48 IST
Last Updated 13 ಸೆಪ್ಟೆಂಬರ್ 2022, 19:48 IST
   

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಒಂದನೇ ಎಸಿಎಂಎಂ ನ್ಯಾಯಾಲಯ ತಿರಸ್ಕರಿಸಿದೆ.

ಪಿಎಸ್ಐ ಹುದ್ದೆಯ ಆಕಾಂಕ್ಷಿಗಳಾದ ಎಸ್.ಜಾಗೃತ್‌, ಆರ್‌. ಮಧು, ಮಧ್ಯವರ್ತಿಗಳಾದ ಸಿ.ಎನ್‌.ಶಶಿಧರ, ಶರತ್‌ಕುಮಾರ್ ಜಾಮೀನು ಅರ್ಜಿ ಗಳನ್ನು ತಿರಸ್ಕರಿಸಿ ನ್ಯಾಯಾಧೀಶ ಆನಂದ ಟಿ.ಚೌಹಾಣ್‌ ಆದೇಶಿಸಿದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದ ವಕೀಲ ಪಿ.ಪ್ರಸನ್ನಕುಮಾರ್, ‘ಆರೋಪಿಗಳ ವಿರುದ್ಧ 55 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದ ಆರೋಪ ಇದೆ. ಪೊಲೀಸ್ ಇಲಾಖೆಯಲ್ಲೇ ಈ ರೀತಿ ನಡೆದರೆ ನಾಳೆ ಇಂತಹವರು ಹುದ್ದೆಗಳನ್ನು ಅಲಂಕರಿಸಿದ ಮೇಲೆ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಅಷ್ಟೇ ಅಲ್ಲ ತನಿಖೆಯೂ ಬಾಕಿ ಇದೆ. ಹೀಗಾಗಿ ಜಾಮೀನು ನೀಡಬಾರದು’ ಎಂದಿದ್ದರು.

ADVERTISEMENT

ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ದಾಖಲಾಗಿದ್ದ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಿದ್ದಾರೆ. ‘ಗಂಭೀರವಾದ ಈ ಪ್ರಕರಣದಲ್ಲಿ ನಾಲ್ವರ ಅರ್ಜಿಗಳನ್ನೂ ತಿರಸ್ಕರಿಸಲಾಗಿದೆ’ ಎಂದು ಆದೇಶಿಸಿದ್ದಾರೆ.‌

‘ಜಾಮೀನು ಕೋರಿದ ಆರೋಪಿ ಗಳಲ್ಲಿ ಇಬ್ಬರು ಆಕಾಂಕ್ಷಿಗಳು ಪ್ರಶ್ನೆ ಪತ್ರಿಕೆಯ 100 ಅಂಕಗಳಲ್ಲಿ 19 ಅಂಕ ಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ನಂತರ ಇವುಗಳನ್ನು 99 ಎಂದು ತಿದ್ದಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಜಾಮೀನು ಕೋರಿದ ಮತ್ತಿಬ್ಬರು ಆರೋಪಿಗಳಾದ ಸಿ.ಎನ್‌.ಶಶಿಧರಚನ್ನರಾಯಪಟ್ಟಣ ಪುರಸಭೆ ಸದಸ್ಯರಾಗಿದ್ದರೆ, ಆರ್‌.ಶರತ್‌ ಕುಮಾರ್ ನಾಗಮಂಗಲದಲ್ಲಿ ಚಿಟ್‌ಫಂಡ್‌ ಫೈನಾನ್ಸ್‌ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.