ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 4ರಿಂದ 23ರವರೆಗೆ ನಡೆಯಲಿದ್ದು, ಸಿದ್ಧತೆ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಲಾಖೆಯ ನಿರ್ದೇಶಕರೊಂದಿಗೆ ಗುರುವಾರ ಇಲ್ಲಿ ಸಮಾಲೋಚನೆ ನಡೆಸಿದರು.
ಈ ಹಿಂದೆ ಬಳಸುತ್ತಿದ್ದ 24 ಪುಟಗಳ ಉತ್ತರ ಪತ್ರಿಕೆಗಳ ಬದಲಾಗಿ ಈ ಬಾರಿ 40 ಪುಟಗಳ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಈ ಮೂಲಕ ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ನೀಡುವಲ್ಲಿ ಉಂಟಾಗುತ್ತಿದ್ದ ಗೊಂದಲವನ್ನು ನಿವಾರಿಸಲಾಗಿದೆ ಎಂದು ನಿರ್ದೇಶಕಿ ಎಂ.ಕನಗವಲ್ಲಿ ಮಾಹಿತಿ ನೀಡಿದರು.
ಗೋಪ್ಯ ವಸ್ತುಗಳನ್ನು ಈ ಹಿಂದೆ ಕೇಂದ್ರ ಕಚೇರಿಯಿಂದ ಮಾತ್ರ ನಿರ್ವಹಿಸಲಾಗುತ್ತಿತ್ತು. ಈ ಬಾರಿಯಿಂದಕೇಂದ್ರ ಕಚೇರಿಯಜತೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಿನಿ ನಿಯಂತ್ರಣ ಘಟಕವನ್ನು ಸ್ಥಾಪಿಸಲಾಗುವುದು ಎಂದರು.
ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕು,ಫೆಬ್ರುವರಿಯಲ್ಲಿ ಜಿಲ್ಲಾಧಿಕಾರಿಗಳು, ಖಜಾನಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವಂತೆ ಸಚಿವರು ಸೂಚಿಸಿದರು.
ಮೌಲ್ಯಮಾಪನ ಮೊದಲೇ ಕೊನೆಗೊಂಡರೂ, ಸಿಇಟಿ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಪಿಯು ಫಲಿತಾಂಶವನ್ನು ಪ್ರಕಟಿಸಲಾಗುವುದು
-ಎಂ.ಕನಗವಲ್ಲಿ, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.