ಬೆಂಗಳೂರು: ‘ಹೊರರಾಜ್ಯ, ದೇಶಗಳಿಂದ ತಾಯ್ನಾಡಿಗೆ ಬರುವವರು ಕ್ವಾರಂಟೈನ್ಗೆ ಒಳಪಡುವುದು ಕಡ್ಡಾಯ. ಅಲ್ಲದೆ, ಅಂಥವರು ಆನ್ಲೈನ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಕ್ವಾರಂಟೈನ್ ಸೌಲಭ್ಯಕ್ಕೆ ಅನುಗುಣವಾಗಿ ಕರೆಸಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಭಾನುವಾರ ಸಭೆ ನಡೆಸಿದ ಮುಖ್ಯಮಂತ್ರಿ, ಬೇರೆ ಬೇರೆ ದೇಶ ಹಾಗು ರಾಜ್ಯದಿಂದ ಕನ್ನಡಿಗರು ವಾಪಸಾಗುತ್ತಿದ್ದು, ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು
‘ಹೊರ ರಾಜ್ಯದಿಂದ ಬರುವ ಕನ್ನಡಿಗರು ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು. ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ರಾಜ್ಯದಿಂದ ಅನಿವಾರ್ಯವಾಗಿ ಹೊರ ಹೋಗಿ ಸಿಕ್ಕಿಹಾಕಿ ಕೊಂಡಿರುವವರಾಗಿರಬೇಕು. ಎಲ್ಲಿಗೆ ಬರುತ್ತೇವೆ ಮತ್ತು ಯಾವಾಗ ಬರುತ್ತೇವೆ ಎಂಬುವುದನ್ನು ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು’ ಎಂದರು.
‘ರಾಜ್ಯಕ್ಕೆ ಬಂದ ತಕ್ಷಣ ಯಾರೂ ಅವರವರ ಊರಿಗೆ ಹೋಗುವಂತಿಲ್ಲ. ಬಂದವರೆಲ್ಲರೂ 14 ದಿನ ಕ್ವಾರಂಟೈನ್ ಆಗಲೇಬೇಕು. ಕ್ವಾರಂಟೈನ್ಗೆ ಸಿದ್ಧ ಇದ್ದವರು ಮಾತ್ರ ನೊಂದಣಿ ಮಾಡಿಕೊಳ್ಳಬೇಕು. ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ’ ಎಂದೂ ಅವರು ತಿಳಿಸಿದರು.
‘ಬೇರೆ ರಾಜ್ಯದಲ್ಲಿ ಕೋವಿಡ್ ತಪಾಸಣೆ ಮಾಡಿಸಿದ್ದರೂ ಇಲ್ಲಿಯೂ ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಬೇಕು. ಅಲ್ಲದೆ, ಇನ್ನು ಮುಂದೆ ಬೇರೆ ರಾಜ್ಯದಲ್ಲಿ ಮೃತರಾದರೆ ಮೃತದೇಹಗಳನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೊ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು. ಅದೇ ರೀತಿ ರಾಜ್ಯದಲ್ಲಿ ಮೃತಪಟ್ಟರೆ, ಆ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು’ ಎಂದೂ ಮುಖ್ಯಮಂತ್ರಿ ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.