
ಕೆ.ಆರ್.ಪುರ: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಬೈರತಿ ಬಸವರಾಜ ಮನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಭೇಟಿ ನೀಡಿ ಕುಟುಂಬದ ಸದಸ್ಯರು ಮತ್ತು ಮುಖಂಡರು, ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿದರು.
‘ಬೈರತಿ ಬಸವರಾಜ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ, ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ನಡೆಯುತ್ತಿದೆ. ಬೈರತಿ ಬಸವರಾಜ ಅವರೊಂದಿಗೆ ಮಾತನಾಡಿದ್ದು ಧೈರ್ಯವಾಗಿರುವಂತೆ ಸಲಹೆ ನೀಡಿದ್ದೇನೆ’ ಎಂದು ಅವರು ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.
‘ಪಕ್ಷ ಹಾಗೂ ನಾನು ನಿಮ್ಮ ಜೊತೆ ಇದ್ದೇವೆ. ಈ ಬಗ್ಗೆ ಚಿಂತಿಸುವುದು ಬೇಡ. ಏನೇ ಬಂದರೂ ಕಾರ್ಯಕರ್ತರು ಶಾಸಕರ ಜೊತೆ ಇದ್ದು ಎದುರಿಸಲು ಸಿದ್ದರಾಗಿಬೇಕು. ನಮ್ಮ ಪಕ್ಷದ 15 ಶಾಸಕರ ವಿರುದ್ದ ದೂರುಗಳನ್ನು ದಾಖಲಿಸಲಾಗಿದೆ’ ಎಂದು ಆರೋಪಿಸಿದರು.
‘ಇಂತಹ ರಾಜಕೀಯ ಷಡ್ಯಂತ್ರಗಳಿಗೆ ನಮ್ಮ ಪಕ್ಷವಾಗಲಿ, ಶಾಸಕರಾಗಲಿ ಹೆದರುವುದಿಲ್ಲ. ದಿಟ್ಟ ಹೋರಾಟ ಮಾಡುತ್ತೇವೆ. ಇನ್ನೆರಡು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ. ಅಲ್ಲಿಯವರೆಗೂ ಸಹಿಸಿಕೊಳ್ಳೋಣ, ಅವರು ಕೊಟ್ಟಿದ್ದನ್ನು ಮುಂದೆ ಅವರಿಗೆ ವಾಪಸ್ ಕೊಡೋಣ. ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಭಾಗಬೇಕು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ’ ಎಂದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಂಡಲ ಅಧ್ಯಕ್ಷ ಮುನೇಗೌಡ, ಮುಖಂಡರಾದ ಸಚ್ಚಿದಾನಂದ, ಗೀತಾ ವಿವೇಕಾನಂದ, ಚಿದಾನಂದ, ಲೋಕೇಶ್, ಮಾರ್ಕೆಟ್ ರಮೇಶ್, ಎಸ್.ಜಿ.ನಾಗರಾಜ್, ವಿ.ಸುರೇಶ್, ಶ್ರೀಕಾಂತ್, ಬಾಕ್ಸರ್ ನಾಗರಾಜ್, ಸಿದ್ದಲಿಂಗಯ್ಯ ಶ್ರೀರಾಮುಲು, ಪ್ರದೀಪ್ ಯಾದವ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.