
ಬೆಂಗಳೂರು: ‘ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಭಿವೃದ್ಧಿ ಇಲ್ಲದೇ ಸೊರಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ‘ಒಂದು ಕಡೆ ಸಿದ್ದರಾಮಯ್ಯ ಅವರೇನೋ ಹೈಕಮಾಂಡ್ ಬಯಸುವವರೆಗೂ ನಾನೇ ಸಿಎಂ ಎಂದು ಪದೆ ಪದೇ ಪುನರುಚ್ಚಾರ ಮಾಡುತ್ತಿದ್ದಾರೆ. ಮತ್ತೊಂದು ಕಡೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಬಳಿ ಒಪ್ಪಂದ ಆಗಿದೆ, ಅಧಿಕಾರ ಹಂಚಿಕೆ ವಿಷಯ ದೆಹಲಿಯಲ್ಲಿ 5–6 ನಾಯಕರ ನಡುವೆ ನಡೆದಿರುವ ‘ಗುಟ್ಟಿನ ವ್ಯಾಪಾರ’ ಎಂದು ಹೇಳುತ್ತಾ ತಮ್ಮ ಕನಸು ನೆರವೇರಿಸಿಕೊಳ್ಳಲು ಗುಡಿ–ಗೋಪುರ ಸುತ್ತುತ್ತಿದ್ದಾರೆ’ ಎಂದು ಕಾಲೆಳೆದಿದ್ದಾರೆ.
‘ಆದರೆ, ಹೈಕಮಾಂಡ್ ಮಾತ್ರ ಇದು ರಾಜ್ಯ ಮಟ್ಟದಲ್ಲಿ ಸೃಷ್ಟಿ ಆಗಿರುವ ಗೊಂದಲ, ನೀವೇ ಬಗೆಹರಿಸಿಕೊಳ್ಳಿ ಎಂದು ಜಾರುತ್ತಿದೆ’ ಎಂದು ಹೇಳಿದ್ದಾರೆ.
6 ತಿಂಗಳಿಂದ ಸಂಬಳವಿಲ್ಲ
‘ದಕ್ಷಿಣಕನ್ನಡ ಜಿಲ್ಲೆಯ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಕುಲದೀಪ್ ಅವರು ಕಳೆದ ಆರು ತಿಂಗಳಿಂದ ಸಂಬಳ ದೊರೆಯದ ಕಾರಣಕ್ಕೆ ರಾಜೀನಾಮೆ ನೀಡಿರುವ ಘಟನೆ ಕಾಂಗ್ರೆಸ್ ಸರ್ಕಾರ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆ’ ಎಂದು ಅಶೋಕ ಹೇಳಿದ್ದಾರೆ.
‘ಹಳ್ಳಿಗಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಸಿಗುವುದೇ ಕಷ್ಟ. ಪರಿಸ್ಥಿತಿ ಹೀಗಿರುವಾಗ, ಇರುವ ವೈದ್ಯರಿಗೆ ಸಂಬಳ ಕೊಡದೆ ರಾಜೀನಾಮೆ ನೀಡುವ ಪರಿಸ್ಥಿತಿ ತಂದಿಟ್ಟರೆ, ಗ್ರಾಮೀಣ ಪ್ರದೇಶದ ಬಡ ಜನರು ಆರೋಗ್ಯ ಸೇವೆ ಪಡೆಯಲು ಏನು ಮಾಡಬೇಕು ಸ್ವಾಮಿ’ ಎಂದು ‘ಎಕ್ಸ್’ ನಲ್ಲಿ ಪ್ರಶ್ನಿಸಿದ್ದಾರೆ.
‘ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ಬರೀ ಡಿನ್ನರ್ ಮೀಟಿಂಗ್ಗಳಲ್ಲೇ ಕಾಲ ಕಳೆಯುತ್ತಾ ಟೈಂಪಾಸ್ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.