ಚೆನ್ನೈ: ನಟ ರಾಜ್ಕುಮಾರ್ ಅಪಹರಣ ಪ್ರಕರಣದ ತೀರ್ಪು 18 ವರ್ಷಗಳ ನಂತರ ಇದೇ 25ರಂದು ಪ್ರಕಟವಾಗಲಿದೆ.
ರಾಜ್ಕುಮಾರ್ ಅವರನ್ನುಕಾಡುಗಳ್ಳ ವೀರಪ್ಪನ್2000ನೇ ಇಸವಿಯ ಜುಲೈ 30ರಂದು ಅಪಹರಿಸಿದ್ದ. ತಮಿಳುನಾಡಿನ ಈರೋಡ್ ಜಿಲ್ಲೆಯ ಗಾಜನೂರಿನಲ್ಲಿದ್ದ ರಾಜ್ ಅವರ ತೋಟದ ಮನೆಯಿಂದ ಅಪಹರಣ ನಡೆದಿತ್ತು.ಈ ಪ್ರಕರಣದಿಂದ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಮಧ್ಯೆ ಬಿಗುವಿನ ವಾತಾವರಣ ಉಂಟಾಗಿತ್ತು.
ಪತ್ರಕರ್ತ ನಕ್ಕೀರನ್ ಗೋಪಾಲ್ ಮಧ್ಯಸ್ಥಿಕೆಯಲ್ಲಿ ಆರು ಸುತ್ತಿನ ಮಾತುಕತೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆ ನಂತರ ಅಪಹೃತರ ಬಿಡುಗಡೆಯಾಗಿತ್ತು. ಆದರೆ ಅಷ್ಟರಲ್ಲಿ 108 ದಿನಗಳು ಕಳೆದಿದ್ದವು.
ಆರೋಪಿಗಳಾದ ವೀರಪ್ಪನ್ ಮತ್ತು ಆತನ ಸಹಚರರಾದ ಸೇತುಕುಳಿ ಗೋವಿಂದನ್, ರಂಗಸ್ವಾಮಿ ಸೇರಿ ಒಟ್ಟು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ವೀರಪ್ಪನ್, ಗೋವಿಂದನ್ ಮತ್ತು ರಂಗಸ್ವಾಮಿ ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ ಐವರು ಜೈಲಿನಲ್ಲಿದ್ದಾರೆ. ತೀರ್ಪನ್ನು ಈರೋಡ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ.ಮಣಿ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.