ರಾಮನಗರ: ಪಾದರಾಯನಪುರ ಗಲಾಟೆ ಆರೋಪಿಗಳಿಗೆ ಜಾಗ ಮಾಡಿಕೊಡುವ ಸಲುವಾಗಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿದ್ದ 177 ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಮಂಗಳವಾರ ಬೆಳಗ್ಗೆ ಸ್ಥಳಾಂತರ ಮಾಡಲಾಯಿತು.
10 ಬಿಎಂಟಿಸಿ ಬಸ್ ಹಾಗೂ ನಾಲ್ಕು ಕೆ ಎಸ್ ಆರ್ ಪಿ ವಾಹನಗಳಲ್ಲಿ ಖೈದಿಗಳನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು. ಪ್ರತಿ ಬಸ್ ಗೆ 18-20 ಮಂದಿಯನ್ನಷ್ಟೇ ಕೂರಿಸುವ ಮೂಲಕ ಅಂತರ ಕಾಯ್ದುಕೊಳ್ಳಲಾಯಿತು. 90ಕ್ಕೂ ಹೆಚ್ಚಿನ ಪೊಲೀಸರು ಭದ್ರತೆ ಒದಗಿಸಿದ್ದರು. ಇವರ ಸ್ಥಳಾಂತರಕ್ಕಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಎಸ್ಪಿ ಗರಂ: ಖೈದಿಗಳ ಕೈಗೆ ಬೇಡಿ ತೊಡಿಸದ್ದಕ್ಕೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಾಂತರದ ಸಂದರ್ಭ ಯಾರಾದರೂ ತಪ್ಪಿಸಿಕೊಂಡರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅಷ್ಟರಲ್ಲಿ ಆಗಲೇ ಒಂದು ಬಸ್ ಹೊರಟಿತ್ತು. ಅದನ್ನೂ ವಾಪಸ್ ಕರೆಸಿಕೊಂಡು ಎಲ್ಲರಿಗೂ ಕೈಕೋಳ ಹಾಕಿ ಕಳುಹಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.