ADVERTISEMENT

ಸಿ.ಡಿ. ಪ್ರಕರಣ | 164 ಹೇಳಿಕೆ ಮುಗಿತು, ಆರೋಪಿ ಬಂಧನ ಯಾವಾಗ?: ವಕೀಲ ಜಗದೀಶ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 13:01 IST
Last Updated 30 ಮಾರ್ಚ್ 2021, 13:01 IST
ವಕೀಲ ಕೆ.ಎನ್. ಜಗದೀಶ್
ವಕೀಲ ಕೆ.ಎನ್. ಜಗದೀಶ್    

ಬೆಂಗಳೂರು: ‘ಅತ್ಯಾಚಾರ ಪ್ರಕರಣ ಸಂಬಂಧ ಯುವತಿ, ಧೈರ್ಯವಾಗಿ ನ್ಯಾಯಾಲಯದ ಎದುರು ಹೇಳಿಕೆ ನೀಡಿದ್ದಾರೆ. ಈಗಲಾದರೂ ಪೊಲೀಸರು ಎಚ್ಚೆತ್ತು, ಆರೋಪಿಯನ್ನು ಬಂಧಿಸಿ ತಮ್ಮ ಕಾನೂನಿನ ನಿಷ್ಠೆ ತೋರಿಸಬೇಕು’ ಎಂದು ಯುವತಿ ಪರ ವಕೀಲ ಕೆ.ಎನ್. ಜಗದೀಶ್‌ಕುಮಾರ್ ಹೇಳಿದರು.

ಆಡುಗೋಡಿಯಲ್ಲಿರುವ ವಿಶೇಷ ವಿಚಾರಣಾ ಕೊಠಡಿ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಜಗದೀಶ್‌ಕುಮಾರ್, ‘ಸಿಆರ್‌ಪಿಸಿ ಸೆಕ್ಷನ್ 161ರಡಿ ಧ್ವನಿ ಮಾದರಿ ಸಂಗ್ರಹಿಸಲು ಯುವತಿಯನ್ನು ಎಸ್‌ಐಟಿ ಬಳಿ ಕರೆತರಲಾಗಿದೆ. ಇದು ಕಾನೂನು ಪ್ರಕ್ರಿಯೆ’ ಎಂದರು.

‘ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ದೂರು ನೀಡಿಲ್ಲ. ಯುವತಿ ಒತ್ತಡಕ್ಕೆ ಒಳಗಾಗಿದ್ದಾಳೆ ಎಂಬ ಸುದ್ದಿಗಳಿಗೆ ತೆರೆ ಎಳೆದಿದ್ದೇವೆ. ಇದೀಗ ಸರ್ಕಾರ, ಆರೋಪಿಯನ್ನು ಬಂಧಿಸುವತ್ತ ಗಮನ ಹರಿಸಬೇಕು’ ಎಂದೂ ಹೇಳಿದರು.

‘ಪ್ರಕರಣದ ಆರೋಪಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸಿಆರ್‌ಪಿಸಿ 164ರಡಿ ಈಗಾಗಲೇ ಯುವತಿಯೂ ಹೇಳಿಕೆ ನೀಡಿದ್ದಾರೆ. ಯುವತಿ, ಪ್ರಾಪ್ತರು. ಅವರಿಗೆ ಅವರದ್ದೇ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯವಿದೆ’ ಎಂದರು.

‘ಧ್ವನಿ ಮಾದರಿ ಪರೀಕ್ಷೆಗೆ ಯುವತಿಯನ್ನು ಒಳಪಡಿಸಬೇಕೆಂದು ಎಸ್‌ಐಟಿಯವರು ಮನವಿ ಮಾಡಿದ್ದರು. ಅದಕ್ಕಾಗಿ ಯುವತಿಯನ್ನು ಆಡುಗೋಡಿಯಲ್ಲಿರುವ ತಾಂತ್ರಿಕ ಕೇಂದ್ರಕ್ಕೆ ಕರೆತರಲಾಗಿದೆ’ ಎಂದೂ ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.