ಬೆಂಗಳೂರು: ‘ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನ್ನದಲ್ಲ. ಆದರೂ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ‘ಇಂಡಿಯಾ ಮೈತ್ರಿ ಕೂಟ’ದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ತಾವು ಆರ್ಎಸ್ಎಸ್ ಪ್ರಾರ್ಥನಾ ಗೀತೆಯ ಸಾಲುಗಳನ್ನು ಉಲ್ಲೇಖಿಸಿರುವುದು ವಿವಾದಕ್ಕೀಡಾದ ಕಾರಣ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿದ ಶಿವಕುಮಾರ್, ‘ನಾನು ವಿರೋಧ ಪಕ್ಷಗಳ ಕಾಲೆಳೆಯಲು ಗೀತೆಯ ಸಾಲುಗಳನ್ನು ಪ್ರಸ್ತಾಪಿಸಿದ್ದೇನೆ. ನನ್ನ ಕೆಲವು ಸ್ನೇಹಿತರು ಇದರಲ್ಲಿ ರಾಜಕೀಯ ಮಾಡಿ, ಗೊಂದಲ ಮೂಡಿಸಲು ಹೊರಟಿದ್ದಾರೆ’ ಎಂದರು.
‘ಆರ್ಎಸ್ಎಸ್ ಹೊಗಳುವುದು ನನ್ನ ಉದ್ದೇಶ ಆಗಿರಲಿಲ್ಲ. ಆದರೆ, ನಿರ್ದಿಷ್ಟ ಭಾಗವನ್ನು ಮಾತ್ರ ಕಟ್ ಆ್ಯಂಡ್ ಪೇಸ್ಟ್ ಮಾಡಿ, ಬೇರೆ ವಿಚಾರಗಳ ಜೊತೆ ಬೆರೆಸಿ ರಾಷ್ಟ್ರಮಟ್ಟದ ಸುದ್ದಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಮತ್ತು ನಂತರ ಆರ್ಎಸ್ಎಸ್ ಹೇಗೆ ಬೇರೂರಿದೆ ಎಂದು ಅರಿತಿದ್ದೇನೆ. ರಾಜ್ಯದಲ್ಲಿ ಈ ಸಂಘಟನೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ರಾಜಕೀಯ ನಾಯಕನಾಗಿ ಅರಿತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ವಿರೋಧಿ ಸಂಘಟನೆ ಬಗ್ಗೆ ತಿಳಿಯುವುದು ನನ್ನ ಕರ್ತವ್ಯ’ ಎಂದರು.
ನನ್ನ ಪಕ್ಷ ನಿಷ್ಠೆ ಪ್ರಶ್ನಿಸುವವರು ಮೂರ್ಖರು:
‘ನಾನು ಹುಟ್ಟು ಕಾಂಗ್ರೆಸಿಗ ಎಂಬ ಹೇಳಿಕೆಗೆ ಬದ್ಧ. ಪಕ್ಷ ಹಾಗೂ ಗಾಂಧಿ ಕುಟುಂಬಕ್ಕೆ ಇರುವ ನನ್ನ ನಿಷ್ಠೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ಮೂರ್ಖರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ನಾನು ಮಾಡಿರುವ ಹೋರಾಟವನ್ನು ಬೇರೆ ಯಾರೂ ಮಾಡಿಲ್ಲ. ಹೋರಾಟದಲ್ಲಿ ನನ್ನ ಸಮೀಪಕ್ಕೂ ಬರಲು ಸಾಧ್ಯವಿಲ್ಲ. ನನ್ನ ಸಮಕಾಲೀನರನ್ನು ಉದ್ದೇಶಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಹಿರಿಯ ನಾಯಕರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಹೇಳಿದರು.
‘ಪಕ್ಷದ ಆಂತರಿಕ ರಾಜಕೀಯದ ಕಾರಣಕ್ಕೆ ನನಗೆ ಟಿಕೆಟ್ ಸಿಗದಿದ್ದಾಗಲೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭಾವಚಿತ್ರ ಹಾಕಿಕೊಂಡೇ ಚುನಾವಣೆ ಗೆದ್ದೆ. ಆಗ ನನ್ನ ಮನೆ ಬಾಗಿಲಿಗೆ ಎಷ್ಟೋ ಜನ ಬಂದರೂ ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸಿಗನಾಗಿಯೇ ಸಾಯುತ್ತೇನೆ ಎಂದು ನಾಲ್ಕೇ ತಿಂಗಳಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಭಾಗವಾದೆ. ಈ ರೀತಿ ರಾಜಕಾರಣ ಮಾಡಿಕೊಂಡು ಬಂದಿರುವನು ನಾನು’ ಎಂದು ವಿವರಿಸಿದರು.
‘ನನ್ನ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು’ ಎಂದರು.
‘ಆರ್ಎಸ್ಎಸ್ ಪ್ರಾರ್ಥನಾ ಗೀತೆ ಉಲ್ಲೇಖಿಸಿದ ವಿಚಾರವಾಗಿ ರಾಹುಲ್ ಗಾಂಧಿ ಅವರು ಸ್ಪಷ್ಟನೆ ಕೇಳಿದ್ದಾರೆಯೇ’ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ಯಾರೂ ನನ್ನನ್ನು ಪ್ರಶ್ನಿಸಿಲ್ಲ. ಹೈಕಮಾಂಡಿನ ಯಾವುದೇ ನಾಯಕರು ಈ ವಿಚಾರವಾಗಿ ನನ್ನ ಜೊತೆ ಮಾತನಾಡಿಲ್ಲ. ಅವರು ಚರ್ಚೆ ಮಾಡಿರಬಹುದು, ಬೇರೆಯವರಿಂದ ಮಾಹಿತಿ ಪಡೆದಿರಬಹುದು. ಎಲ್ಲರಿಗೂ ನನ್ನ ಮೇಲೆ ನಂಬಿಕೆ ಇದೆ. ಎಲ್ಲಿ ಹುಟ್ಟಿದ್ದೇನೆ, ಎಲ್ಲಿ ಸಾಯುತ್ತೇನೆ ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಪಕ್ಷದ ಹೈಕಮಾಂಡ್ ನಾನು ಮಾತ್ರವಲ್ಲ, ನನ್ನ ಅಕ್ಕಪಕ್ಕದಲ್ಲಿ ಏನೇನಾಗುತ್ತಿದೆ ಎಂಬುದರ ಬಗ್ಗೆಯೂ ಅಧ್ಯಯನ ಮಾಡಿರುತ್ತದೆ’ ಎಂದು ಉತ್ತರಿಸಿದರು.
‘ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ’
‘ನನ್ನನ್ನು ಬೆದರಿಸಿ ಕ್ಷಮೆ ಕೇಳಿಸಲಾಗಿದೆ ಎಂಬ ಭಾವನೆ ಬೇಡ. ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಡೆದ ಸಾತನೂರು ಘಟನೆ ಬೇರೆ ಬೇರೆ ಘಟನೆಗಳು ಸದನದಲ್ಲಿ ನಡೆದ ಘಟನೆಗಳು ಆಪರೇಷನ್ ಕಮಲ ಆದಾಗ ಏನಾಯಿತು? ಯಾರು ಯಾರು ಯಾವ ಮೂಲದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂಬುದು ಗೊತ್ತಿರಬೇಕು. ನನ್ನ ಬದ್ಧತೆ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ಯಾರಾದರೂ ರಾಜಕೀಯ ಮಾಡಿದರೆ ಅದು ಅವರ ಇಚ್ಛೆ’ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಇಟಲಿ ಮಾತೆಗೆ ವಂದಿಸಬೇಕಿತ್ತಾ: ಆರ್.ಅಶೋಕ ಪ್ರಶ್ನೆ
‘ಡಿ.ಕೆ.ಶಿವಕುಮಾರ್ ಅವರು ಭಾರತ ಮಾತೆಗೆ ನಮಸ್ಕರಿಸಿದ್ದಕ್ಕೆ ಕ್ಷಮೆ ಕೇಳುವಂತಾಗಿದೆ. ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ ಅಥವಾ ಇಟಲಿಯಿಂದ ಬಂದ ಮೇಡಮ್ಗಾ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಜನ್ಮ ಕೊಟ್ಟ ಮಾತೃಭೂಮಿ ಬಗ್ಗೆ ಈ ಭಾವನೆ ಇಟ್ಟುಕೊಳ್ಳುವುದು ತಪ್ಪೇ? ತಾಯಿ ನೆಲಕ್ಕೆ ನಮಸ್ಕಾರ ಮಾಡುವುದೇ ತಪ್ಪೇ? ಒಂದು ಕಡೆ ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದವರನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ಮತ್ತೊಂದೆಡೆ ಭಾರತಾಂಬೆಗೆ ನಮಸ್ಕರಿಸುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದನ್ನು ದೇಶದ್ರೋಹಿ ಮನಸ್ಥಿತಿ ಅನ್ನದೇ ಇನ್ನೇನು ಹೇಳಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
‘ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು? ಸೋನಿಯಾ ಗಾಂಧಿ ಅವರಾ? ರಾಹುಲ್ ಗಾಂಧಿ ಅವರಾ? ಕೆ.ಸಿ.ವೇಣುಗೋಪಾಲ್ ಅವರಾ? ಸುರ್ಜೇವಾಲಾ ಅವರಾ? ಅಥವಾ ಹರಿಪ್ರಸಾದ್ ಅವರಾ? ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಮತ್ತು ಧೈರ್ಯ ಇದ್ದಿದ್ದರೆ ಕಾಂಗ್ರೆಸ್ನ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿತ್ತು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.