ADVERTISEMENT

ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ: ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸ್ಪಷ್ಟೀಕರಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 18:30 IST
Last Updated 17 ನವೆಂಬರ್ 2018, 18:30 IST

ಚಿತ್ರದುರ್ಗ: ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸೇವಿಸುವ ಆಹಾರದ ಪರೀಕ್ಷೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

‘ಕೆಲವೊಮ್ಮೆ ಸತ್ಯ ಹೇಳುವುದು, ನಿಷ್ಠುರವಾಗಿ ಮಾತನಾಡುವುದು ಮೂಲಭೂತವಾದಿಗಳಿಗೆ ರುಚಿಸುವುದಿಲ್ಲ. ಹಾಗಾಗಿ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಸಾಹಸ ಮಾಡುತ್ತಾರೆ. ಬಸವ ಪರಂಪರೆಯಲ್ಲಿ ಬೆಳೆದುಬಂದ ನಾವು ನ್ಯಾಯನಿಷ್ಠುರಿಗಳಾಗಿ, ದಾಕ್ಷಿಣ್ಯಪರರಾಗದೆ ಆಡುವ ನುಡಿಗಳು ಕೆಲವರ ಹೊಟ್ಟೆಯಲ್ಲಿ ಖಾರ ಕಲಸಿದಂತೆ ಕೆಲಸ ಮಾಡುವುದುಂಟು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೆ ಉಪ ಮುಖ್ಯಮಂತ್ರಿ ಪರಮೇಶ್ವರ ಬಂದಿದ್ದರು. ಅವರಿಗೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಆಹಾರದ ಪರೀಕ್ಷೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದು ಕಂಡು ಅಚ್ಚರಿಯಾಯಿತು. ನಾಟಕೋತ್ಸವದಲ್ಲಿ ಐದಾರು ಸಾವಿರ ಜನ ನಿತ್ಯ ಪ್ರಸಾದ ಸ್ವೀಕರಿಸುತ್ತಾರೆ. ಅವರ ಆಹಾರವನ್ನು ಎಂದಾದರೂ ಪರೀಕ್ಷಿಸಿದ್ದೀರಾ? ಒಬ್ಬರು ಸತ್ತರೆ ಏನೂ ಆಗಲ್ಲ. ಸಾವಿರಾರು ಜನರು ಸತ್ತರೆ ಗತಿ ಏನು ಎಂದು ಪ್ರಶ್ನಿಸಿದ್ದೆ’ ಎಂದಿದ್ದಾರೆ.

ADVERTISEMENT

‘ಸಾರ್ವಜನಿಕರು ಸ್ವೀಕರಿಸುವ ಆಹಾರವನ್ನು ನಿಜಕ್ಕೂ ಪರೀಕ್ಷಿಸಬೇಕಿದೆ. ಇದರರ್ಥ ಒಬ್ಬರ ಬಗ್ಗೆ ವಿಶೇಷ ಕಾಳಜಿ ತೋರುವುದು ಸಲ್ಲದೆಂದು ನಮ್ಮ ಅಭಿಪ್ರಾಯವಲ್ಲ. ಈ ವಿಚಾರವನ್ನು ಸಭೆಯಲ್ಲಿ ಸಹ ಪ್ರಸ್ತಾಪ ಮಾಡಿದ್ದೆವು. ನಮ್ಮ ಮಾತುಗಳನ್ನು ಪರಮೇಶ್ವರ ಹಾಗೂ ವೇದಿಕೆಯಲ್ಲಿದ್ದ ಗಣ್ಯರು, ಸಭಿಕರು ಹಸನ್ಮುಖಿಗಳಾಗಿ ಸಕಾರಾತ್ಮಕವಾಗಿ ಸ್ವೀಕರಿಸಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.