ADVERTISEMENT

ಹರಾಜಿನಲ್ಲಿ ಅಭ್ಯರ್ಥಿಗಳ ಆಯ್ಕೆ; ಹಿಂದೆ ಸರಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 19:27 IST
Last Updated 7 ಡಿಸೆಂಬರ್ 2020, 19:27 IST

ಹೊಸಪೇಟೆ: ಹರಾಜಿನ ಮೂಲಕ ಗ್ರಾಮ ಪಂಚಾಯಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಮುಂದಾಗಿದ್ದ ತಾಲ್ಲೂಕಿನ ಪೋತಲಕಟ್ಟೆ ಗ್ರಾಮದ ಮುಖಂಡರು ಸೋಮವಾರ ಈ ಕ್ರಮ ದಿಂದ ಹಿಂದೆ ಸರಿದಿದ್ದಾರೆ.

ಗ್ರಾಮದ ಹಿರಿಯರು, ಮುಖಂಡರು ಗ್ರಾಮದಲ್ಲಿ ಸಭೆ ಸೇರಿ, ‘ಸಾಧ್ಯವಾದರೆ ಆಯಾ ಕೆಟಗರಿಗಳಲ್ಲಿ ಒಮ್ಮತದ ಅಭ್ಯರ್ಥಿ ನಿಲ್ಲಿಸಿ, ಅವಿರೋಧ ಆಯ್ಕೆ ಮಾಡಬಹುದು. ಇಲ್ಲವಾದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸ
ಬಹುದು. ಚುನಾವಣೆಗೆ ನಿಲ್ಲುವ ವರನ್ನು ಯಾರು ಅಡ್ಡಿಪಡಿಸಬಾರದು’ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆ.

ಭಾನುವಾರ ಸಭೆ ನಡೆಸಿ ಹರಾಜಿನ ಮೂಲಕ ಅಭ್ಯರ್ಥಿಗಳ ಆಯ್ಕೆಗೆ ಮುಖಂಡರು ಮುಂದಾಗಿದ್ದರು. ಅದಕ್ಕೆ ‘ಸಮೂಹ ಶಕ್ತಿ’ ಸಂಘಟನೆಯ ಮುಖಂಡ ದೇವರಾಜ್‌, ತಾಯಪ್ಪ ಸೇರಿದಂತೆ ಒಟ್ಟು 7 ಜನ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಪಿ.ಎಂ. ಬಸವರಾಜ್‌ ಎನ್ನುವವರು ತಾಯಪ್ಪ ಮೇಲೆ ಹಲ್ಲೆ ನಡೆಸಿದ್ದರು. ಈ 7 ಜನರ ವಿರುದ್ಧವೇ ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೊಂಬಿ, ಗಲಾಟೆ ಪ್ರಕರಣ ದಾಖಲಾಗಿತ್ತು. ಗ್ರಾಮಸ್ಥರ ಬದಲಾದ ನಿರ್ಧಾರವನ್ನು ದೇವರಾಜ್‌ ಸ್ವಾಗತಿಸಿದ್ದಾರೆ.

ADVERTISEMENT

25 ವರ್ಷಗಳಿಂದ ಅವಿರೋಧ ಆಯ್ಕೆ

ಹಿರೇಬಾಗೇವಾಡಿ (ಬೆಳಗಾವಿ): ಬೈಲಹೊಂಗಲ ತಾಲ್ಲೂಕಿನ ಮರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಣಿಕೊಪ್ಪ ಗ್ರಾಮದ ಪರಿಶಿಷ್ಟ ಪಂಗಡಕ್ಕೆ(ಎಸ್.ಟಿ) ಮೀಸಲಾಗಿರುವ ಸ್ಥಾನಕ್ಕೆ ಕಳೆದ 25 ವರ್ಷಗಳಿಂದ ಅವಿರೋಧ ಆಯ್ಕೆ ನಡೆದಿರುವುದು ಗಮನ ಸೆಳೆದಿದೆ.

ಗ್ರಾಮದಲ್ಲಿ ಇತರೆ ಜಾತಿಗೆ ಸೇರಿದ 200ರಿಂದ 300 ಕುಟುಂಬಗಳಿವೆ. ಪರಿಶಿಷ್ಟ ಪಂಗಡದ 70-80 ಕುಟುಂಬಗಳಿವೆ. ಪ್ರತಿ ಚುನಾವಣೆಯಲ್ಲಿ ಸರದಿ ಯಂತೆ ಒಂದೊಂದು ಮನೆತನದವರಿಗೆ ಆ ಸ್ಥಾನ ಬಿಡಲಾಗುತ್ತದೆ. ಗ್ರಾಮ ಹಾಗೂ ಸಮುದಾಯದ ಮುಖಂಡರು ಸಮಾಲೋಚಿಸಿ ಕುಟುಂಬ ವನ್ನು ತೀರ್ಮಾನಿಸುತ್ತಾರೆ. ಹೀಗಾಗಿ ಈ ಕ್ಷೇತ್ರವು ಚುನಾವಣೆಯನ್ನೇ ಕಂಡಿಲ್ಲ.

‘ಹಲವು ವರ್ಷಗಳಿಂದ ಎಸ್.ಟಿ. ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿದೆ. ಆಯ್ಕೆಯಾದವರು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಅವಿರೋಧ ಆಯ್ಕೆ
ಮಾಡುತ್ತೇವೆ’ ಎಂದು ಗ್ರಾಮದ ಪ್ರಮುಖ ಬಾಬು ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.