ದಾವಣಗೆರೆ: ಜಿಲ್ಲೆಯ ಅಭಿವೃದ್ಧಿಗೆ ಅನುದಾನ ತಂದ ವಿಚಾರಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆಯಿತು.
ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳವಾರ ನಡೆದ ಹಳೆ ಬಸ್ನಿಲ್ದಾಣ ನವೀಕರಣ ಕಾಮಗಾರಿಗೆ ಭೂಮಿಪೂಜೆ ಸಮಾರಂಭದಲ್ಲಿ ಅಕ್ಕ–ಪಕ್ಕ ಕುಳಿತಿದ್ದ ಇಬ್ಬರೂ ನಾಯಕರು ವಾಗ್ವಾದ ನಡೆಸಿದರು.
ನಗರಕ್ಕೆ ನೀರು ಪೂರೈಸಲು ಜಲಸಿರಿ ಯೋಜನೆಯ ಅಂದಾಜು ವೆಚ್ಚವನ್ನು ₹ 125 ಕೋಟಿಯಿಂದ ₹ 550 ಕೋಟಿಗೆ ಮಾಡಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ ಎಂದು ಶಾಮನೂರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಯಾಗಿ ಸಿದ್ದೇಶ್ವರ,‘ಮೋದಿ ಅನುದಾನ ಕೊಟ್ಟಿದ್ದಾರೆ’ ಎಂದರು. ‘ಬರಿ ಮೋದಿ, ಮೋದಿಎನ್ನುತ್ತೀರಿ. ನೀನು ಏನು ಮಾಡಿದ್ದಿ ಹೇಳಪ್ಪ’ ಎಂದು ಶಾಮನೂರು ಕಾಲೆಳೆದರು. ‘ದಾವಣಗೆರೆ ಎಂದರೆ ಶಾಮನೂರು ಮತ್ತು ಅವರ ಮಕ್ಕಳಷ್ಟೆ. ಇಲ್ಲಿ ಕಾಂಗ್ರೆಸ್ ಇಲ್ಲ’ ಎಂದು ಸಿದ್ದೇಶ್ವರ ಹೇಳಿದರು. ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಮಾಡಿದಾಗ, ‘ನಾವಿಬ್ಬರು ಮಾತನಾಡುತ್ತಿದ್ದೇವೆ. ನೀವು ಮಧ್ಯೆ ಬರಬೇಡಿ’ ಎಂದು ಸಿದ್ದೇಶ್ವರ ಹೇಳಿದರು. ‘ಮಾವ–ಅಳಿಯ ಮಾತನಾಡುತ್ತಿದ್ದಾರೆ’ ಎಂದು ಕಾರ್ಯಕರ್ತರು ಗೇಲಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.