ADVERTISEMENT

‘ಸಿದ್ಧಗಂಗಾ ಶ್ರೀಗೆ ಮುಸ್ಲಿಮ್ ವೈದ್ಯರಿಂದ ಚಿಕಿತ್ಸೆ’ ಡಿಕೆಶಿ ಹೇಳಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 10:29 IST
Last Updated 10 ಡಿಸೆಂಬರ್ 2018, 10:29 IST
ಡಾ.ಶಿವಕುಮಾರ ಸ್ವಾಮೀಜಿ
ಡಾ.ಶಿವಕುಮಾರ ಸ್ವಾಮೀಜಿ   

ತುಮಕೂರು: ‘ಸಿದ್ಧಗಂಗಾ ಸ್ವಾಮೀಜಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ ಮಹಮ್ಮದ್ ರೇಲಾ ಅವರು ಮುಸ್ಲಿಮರಾಗಿದ್ದಾರೆ’ ಎಂದು ಜನಸಂ‍ಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಠದ ಭಕ್ತರಲ್ಲಿ ವ್ಯಾಪಕವಾದ ಆಕ್ಷೇಪ ವ್ಯಕ್ತವಾಗಿದೆ.

ಶನಿವಾರ ರಾತ್ರಿ ಆಸ್ಪತ್ರೆಗೆ ಶಿವಕುಮಾರ್ ಭೇಟಿ ನೀಡಿ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ್ದರು. ನಂತರ, ‘ನನಗೆ ಬಹಳ ಸಂತೋಷವಾಗುತ್ತಿದೆ. ಇಂತಹ ಆಸ್ಪತ್ರೆಯನ್ನು ನಾನು ನೋಡಿಯೇ ಇಲ್ಲ. ಐದು ದಿನದ ಮಗುವಿನಿಂದ ಹಿಡಿದು 111 ವರ್ಷದ ಸ್ವಾಮೀಜಿ ಅವರಿಗೆ ರೇಲಾ ಅವರು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಗಮನಿಸಬೇಕಾದ ವಿಚಾರ ಎಂದರೆ ನಾವೆಲ್ಲ ಜಾತಿ–ಧರ್ಮದ ಬಗ್ಗೆ ಮಾತನಾಡುತ್ತೇವೆ ಆದರೆ ಮಹಮ್ಮದ್ ರೇಲಾ ಅವರು ಮುಸ್ಲಿಮರಾಗಿದ್ದಾರೆ’ ಎಂದು ಶಿವಕುಮಾರ್ ಹೇಳಿದ್ದರು.

ಈ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ತೀವ್ರವಾದ ಆಕ್ಷೇಪಗಳು ಕೇಳಿ ಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ‘ವೈದ್ಯರಿಗೆ, ಶಿಕ್ಷಕರಿಗೆ ಜಾತಿಯೇ ಇಲ್ಲ. ವೈದ್ಯೋ ನಾರಾಯಣೋ ಹರಿ ಎನ್ನುವರು. ಶಿವಕುಮಾರ್ ಉತ್ಸಾಹದಲ್ಲಿ ಹೀಗೆ ಹೇಳಿರಬೇಕು’ ಎಂದಿದ್ದಾರೆ.

ADVERTISEMENT

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ಮತ್ತು ವಿರೋಧ ಪಕ್ಷ ಬಿಜೆಪಿಯ ಮುಖಂಡರು ಶಿವಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.