ಬೆಂಗಳೂರು: ‘ಮುಂಬೈ ಆಕಾಶವಾಣಿಯಲ್ಲಿ ಸ್ಥಗಿತಗೊಂಡಿರುವ ಕನ್ನಡ ಕಾರ್ಯಕ್ರಮವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಪತ್ರ ಬರೆದಿರುವ ಬರಗೂರು, ‘ಏಳು ದಶಕಗಳಿಂದ ಪ್ರಸಾರ ಮಾಡಲಾಗುತ್ತಿದ್ದ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಗಿದೆ. ಇದು ಖಂಡನೀಯ ನಡೆಯಾಗಿದ್ದು, 25 ಲಕ್ಷಕ್ಕೂ ಅಧಿಕ ಮುಂಬೈ
ಕನ್ನಡಿಗರಿಗೆ ಅನ್ಯಾಯವಾಗಿದೆ. ಸಂವಿಧಾನಾತ್ಮಕವಾಗಿಯೂ ಇದು ಸರಿಯಾದ ಕ್ರಮವಲ್ಲ. ಸಾಕಷ್ಟು ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಮುಂಬೈ ಕನ್ನಡಿಗರಿಗೆ ತಮ್ಮ ಭಾಷೆಯಲ್ಲೇ ಕಾರ್ಯಕ್ರಮಗಳನ್ನು ಕೇಳುವ ಅವಕಾಶವನ್ನು ಸಂವಿಧಾನದ ಆಶಯದಂತೆ ಒದಗಿಸಬೇಕು’ ಎಂದು ಅವರು ತಿಳಿಸಿದ್ದಾರೆ.
‘ಇದರ ಬಗ್ಗೆ ಪ್ರಸಾರ ಭಾರತಿ ಅಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಮನವರಿಕೆ ಮಾಡಿಸಿ, ಕಾರ್ಯಕ್ರಮ ಪುನರಾರಂಭವಾಗಲು ಕಾರಣರಾಗಬೇಕು’ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.