ಗದಗ: ಇಲ್ಲಿನ ತೋಂಟದಾರ್ಯ ಸಂಸ್ಥಾನಮಠದ 19ನೇ ಪೀಠಾಧಿಪತಿಗಳಾಗಿದ್ದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ(71) ಅವರು ಶನಿವಾರ ನಸುಕಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಸ್ವಾಮೀಜಿ, ಬೆಳಗಿನ ಜಾವವೇ ನಿದ್ರೆಯಿಂದ ಏಳುತ್ತಿದ್ದರು. ಆದರೆ, ಶನಿವಾರ ಬೆಳಿಗ್ಗೆ 9 ಗಂಟೆಯಾದರೂ ಅವರು ಮಲಗಿದ್ದ ಕೋಣೆಯ ಬಾಗಿಲು ತೆರೆಯದಿರುವುದನ್ನು ಕಂಡು, ಸಂಶಯಗೊಂಡ ಮಠದ ಸಿಬ್ಬಂದಿ ಪರಿಶೀಲಿಸಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರನ್ನು ಸಮೀಪದ ಚಿರಾಯು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮರಣ ಸಂಭವಿಸಿದೆ ಎಂದು ಪ್ರಕಟಿಸಿದರು.
ಸ್ವಾಮೀಜಿ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಮಠಕ್ಕೆ ತೆಗೆದುಕೊಂಡು ಬರಲು ಸಿದ್ಧತೆಗಳು ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಮಠದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಆರೋಗ್ಯವಾಗಿದ್ದ ಸ್ವಾಮೀಜಿ: ಶುಕ್ರವಾರ ರಾತ್ರಿ ಮಠದಲ್ಲಿ ವಿಜಯದಶಮಿ ಅಂಗವಾಗಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ಭಕ್ತರಿಗೆ ಬನ್ನಿ ಹಂಚಿ, ಬಂಗಾರದಂತೆ ಬಾಳೋಣ ಎಂದು ಆರ್ಶೀವಚನ ನೀಡಿದ್ದರು.‘ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಹೋರಾಟ ನಿರಂತರ.
ಈ ಹೋರಾಟ ಬೆಂಬಲಿಸಿದವರನ್ನು ಸಮಾಜ ಸ್ಮರಿಸಬೇಕು. ವಿರೋಧಿಸಿದವರನ್ನು ಹಾಗೂ ವಿರೋಧಿಸುತ್ತಿರುವವರನ್ನು ಸಮಾಜ ಉಪೇಕ್ಷಿಸಬೇಕು’ಎಂದು ಹೇಳಿದ್ದರು. ಆರೋಗ್ಯವಾಗಿಯೇ ಇದ್ದ ಸ್ವಾಮೀಜಿ ಅವರ ಆಕಸ್ಮಿಕ ನಿಧನವು ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಇವನ್ನೂ ಓದಿ
ಮಳೆ ನೀರು ಸಂಗ್ರಹ: ತೋಂಟದ ಶ್ರೀ ಸಲಹೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.