ADVERTISEMENT

ಉಪಚುನಾವಣೆ ಫಲಿತಾಂಶ ಜೆಡಿಎಸ್‌ಗೆ ಪಾಠ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 11:27 IST
Last Updated 2 ನವೆಂಬರ್ 2021, 11:27 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಚಿಕ್ಕಮಗಳೂರು: ‘ಜನರು ನಮ್ಮ ನಡೆ, ನುಡಿ ಆಧರಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಜೆಡಿಎಸ್‌ ಪಕ್ಷಕ್ಕೆ ಈ ಉಪಚುನಾವಣೆಯಲ್ಲಿ ಗೊತ್ತಾಗಿದೆ ಅನಿಸುತ್ತಿದೆ. ಜೆಡಿಎಸ್‌ನವರು ಜವಾಬ್ದಾರಿಯಿಂದ ಮಾತಾಡಬೇಕು ಮತ್ತು ನಡೆದುಕೊಳ್ಳಬೇಕು’ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದ್ವೇಷ, ಜಾತಿ, ಧರ್ಮ ಆಧಾರಿತ ರಾಜಕಾರಣ ಬಹಳ ದಿನ ನಡೆಯಲ್ಲ. ಜನ ಬುದ್ಧಿವಂತರಾಗಿದ್ದಾರೆ. ಜನರಿಗೆ ಜಗತ್ತಿನ ಮಾಹಿತಿ ತಕ್ಷಣ ಸಿಗುತ್ತಿದೆ. ನಮ್ಮನ್ನು ಅಳತೆ ಮಾಡುತ್ತಾರೆ. ಮತದಾರರನ್ನು ಹಗುರವಾಗಿ ‘ಟೇಕನ್‌ ಫಾರ್‌ ಗ್ರಾಂಟೆಡ್‌’ ಮಾಡಿಕೊಳ್ಳಬಾರದು ಎಂದು ಹಿರಿಯ ನಾಯಕರಿಗೆ ಮನವಿ ಮಾಡುತ್ತೇನೆ’ ಎಂದರು.

‘ಟೀಕೆ ಮಾಡುವ ಮುನ್ನ ಹಿನ್ನೆಲೆ– ಮುನ್ನೆಲೆ ತಿಳಿದುಕೊಳ್ಳಬೇಕು. ಆರ್‌ಎಸ್‌ಎಸ್‌ ಏನು ಕೆಲಸ ಮಾಡುತ್ತಿದೆ, ಆರ್‌ಎಸ್‌ಎಸ್‌ನಲ್ಲಿರುವ ನಾಯಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಂಡು ಮಾತಾಡಬೇಕು. ‘ವೋಟ್‌ಬ್ಯಾಂಕ್‌’ ರಾಜಕಾರಣಕ್ಕಾಗಿ, ಧರ್ಮ, ಜಾತಿ ಓಲೈಕೆಗಾಗಿ ಅವಸರಿಸಿ ಮಾತನಾಡಿದರೆ ಜನರು ಪಾಠ ಕಲಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.