ADVERTISEMENT

ಕಂಚಿನ ಕಂಠದ ಗಾಯಕನಿಗೆ ಭಾವಪೂರ್ಣ ವಿದಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 21:01 IST
Last Updated 12 ಆಗಸ್ಟ್ 2022, 21:01 IST
ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ, ವೈ.ಕೆ.ಮುದ್ದುಕೃಷ್ಣ, ಶ್ರೀನಿವಾಸ್ ಉಡುಪ ಹಾಗೂ ಅಭಿಮಾನಿಗಳು ಶಿವಮೊಗ್ಗ ಸುಬ್ಬಣ್ಣ ಅವರ ಅಂತಿಮ ದರ್ಶನ ಪಡೆದರು. ಸೊಸೆ ಅರ್ಚನಾ ಉಡುಪ, ಪುತ್ರ ಶ್ರೀರಂಗ ಇದ್ದರು –ಪ್ರಜಾವಾಣಿ ಚಿತ್ರ
ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ, ವೈ.ಕೆ.ಮುದ್ದುಕೃಷ್ಣ, ಶ್ರೀನಿವಾಸ್ ಉಡುಪ ಹಾಗೂ ಅಭಿಮಾನಿಗಳು ಶಿವಮೊಗ್ಗ ಸುಬ್ಬಣ್ಣ ಅವರ ಅಂತಿಮ ದರ್ಶನ ಪಡೆದರು. ಸೊಸೆ ಅರ್ಚನಾ ಉಡುಪ, ಪುತ್ರ ಶ್ರೀರಂಗ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ತಮ್ಮ ಕಂಚಿನ ಕಂಠದ ಮೂಲಕ ನಾಡಿನ ಜನರ ಹೃದಯಗಳನ್ನು ‘ಆನಂದಮಯ’ಗೊಳಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರಿಗೆ, ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಗಾಯನದ ಮೂಲಕ ಶುಕ್ರವಾರ ಭಾವಪೂರ್ಣ ವಿದಾಯ ಹೇಳಿದರು.

ಕಲಾಕ್ಷೇತ್ರದ ಆವರಣದಲ್ಲಿ ಸುಬ್ಬಣ್ಣ ಅವರು ಚಿರನಿದ್ದೆಗೆ ಜಾರಿದ್ದರೇ, ಅವರು ಹಾಡಿದ್ದ ಗೀತೆಗಳನ್ನು ಶಿಷ್ಯರು ಹಾಗೂ ಸಮಕಾಲೀನರು ಹಾಡುವ ಮೂಲಕ ಗೀತ ನಮನ ಸಲ್ಲಿಸಿದರು. ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ತಮ್ಮ ನೆಚ್ಚಿನ ಗಾಯಕನ ಅಂತಿಮ ದರ್ಶನ ಪಡೆದುಕೊಂಡರು. ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಪುತ್ರ ಶ್ರೀರಂಗ, ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕನಿಗೆ ಸರ್ಕಾರಿ ಗೌರವದೊಂದಿಗೆ ವಿದಾಯ ಹೇಳಲಾಯಿತು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಸುಬ್ಬಣ್ಣ ಅವರು ಕೆಲ ದಿನಗಳಿಂದ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದುಕೊಳ್ಳುತ್ತಿದ್ದರು. ಆರೋಗ್ಯ ಮತ್ತಷ್ಟು ಹದಗೆ‌ಟ್ಟಿದ್ದರಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಗುರುವಾರ ರಾತ್ರಿ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ADVERTISEMENT

ಶುಕ್ರವಾರ ಬೆಳಿಗ್ಗೆ ಬನಶಂಕರಿಯಲ್ಲಿರುವ ಅವರ ನಿವಾಸದಲ್ಲಿ ವಿವಿಧ ಧಾರ್ಮಿಕ ಸಂಪ್ರದಾಯ ಪೂರ್ಣಗೊಳಿಸಿ, ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.