ಬೆಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಏಕಗವಾಕ್ಷಿ ಅನುಮೋದನೆ ಸಮಿತಿಯು ₹ 3,455.39 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವದ 59 ಯೋಜನೆಗಳಿಗೆ ಮಂಗಳವಾರ ಒಪ್ಪಿಗೆ ನೀಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಈ ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 18,567 ಉದ್ಯೋಗಗಳು ಸೃಜನೆಯಾಗಲಿವೆ ಎಂದು ಅಂದಾಜಿಸಲಾಗಿದೆ.
‘₹ 50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಹೂಡಿಕೆಯ 11 ಬೃಹತ್ ಹಾಗೂ ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಲ್ಲಿ ಒಟ್ಟು ₹ 2,186.70 ಕೋಟಿ ಹೂಡಿಕೆಯಾಗಲಿದ್ದು, 10,599 ಉದ್ಯೋಗಗಳು ಸೃಜನೆಯಾಗಲಿವೆ. ₹ 15 ಕೋಟಿಯಿಂದ ₹ 50 ಕೋಟಿವರೆಗಿನ ಹೂಡಿಕೆಯ 46 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಲ್ಲಿ ಒಟ್ಟು ₹ 1,049.19 ಕೋಟಿ ಹೂಡಿಕೆಯಾಗಲಿದ್ದು, 8,008 ಉದ್ಯೋಗಗಳ ಸೃಜನೆಯಾಗಲಿದೆ’ ಎಂದು ನಿರಾಣಿ ತಿಳಿಸಿದ್ದಾರೆ.
ಒಟ್ಟು ₹ 219.50 ಮೊತ್ತದ ಎರಡು ಹೆಚ್ಚುವರಿ ಹೂಡಿಕೆ ಪ್ರಸ್ತಾವಗಳಿಗೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅನುಮೋದನೆಗೊಂಡಿರುವ ಯೋಜನೆಗಳ ವಿವರ: ಮೈಸೂರು ಸ್ಟೀಲ್ಸ್ ಲಿಮಿಟೆಡ್ನಿಂದ ಮೈಸೂರಿನ ಮೇಟಗಾನಹಳ್ಳಿಯಲ್ಲಿ ₹ 405.43 ಕೋಟಿ ಹೂಡಿಕೆ (200 ಉದ್ಯೋಗ ಸೃಷ್ಟಿ), ಎನ್ಐಡಿಸಿ ಇಂಡಸ್ಟ್ರಿಯಲ್ ಆಟೊಮೋಷನ್ ಇಂಡಿಯಾ ಲಿಮಿಟೆಡ್ನಿಂದ ಬೇಲೂರು ಕೈಗಾರಿಕಾ ಪ್ರದೇಶದ ಕೋಟೂರ್ನಲ್ಲಿ ₹ 350 ಕೋಟಿ ಹೂಡಿಕೆ (730 ಉದ್ಯೋಗ ಸೃಷ್ಟಿ), ಧಾರವಾಡದ ಎಫ್ಎಂಸಿಜಿ ಕ್ಲಸ್ಟರ್ನಲ್ಲಿ ಸಿಲಾನ್ ಬೆವರೇಜಸ್ನಿಂದ ₹ 256.3 ಕೋಟಿ ಹೂಡಿಕೆ (200 ಉದ್ಯೋಗ ಸೃಷ್ಟಿ), ಬೆಳಗಾವಿ ಜಿಲ್ಲೆಯ ಕಣಗಲ್ ಕೈಗಾರಿಕಾ ಪ್ರದೇಶದಲ್ಲಿ ಬಾಲಾಜಿ ವೇರ್ ಹೌಸ್ ಪ್ರೈವೇಟ್ ಲಿಮಿಟೆಡ್ನಿಂದ ₹ 252.25 ಕೋಟಿ ಹೂಡಿಕೆ (500 ಉದ್ಯೋಗ), ಚಾಮರಾಜನಗರ ಬಡಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಜುಶ್ರೀ ಟೆಕ್ನೋಪಾರ್ಕ್ ಲಿಮಿಟೆಡ್ನಿಂದ ₹ 253 ಕೋಟಿ ಹೂಡಿಕೆ (500 ಉದ್ಯೋಗ).
ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಕ್ಸಿಸೋಡ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ₹ 138 ಕೋಟಿ ಹೂಡಿಕೆ (160 ಉದ್ಯೋಗ), ಬಳ್ಳಾರಿ ಜಿಲ್ಲೆಯ ಬೆಳಗಲ್ ಗ್ರಾಮದಲ್ಲಿ ಮಹಾಮಾನವ್ ಇನ್ಸ್ಪಾಟ್ ಪ್ರೈವೇಟ್ ಲಿಮಿಟೆಡ್ನಿಂದ ₹ 90 ಕೋಟಿ ಹೂಡಿಕೆ (90 ಉದ್ಯೋ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ ಎ.ಸಿ.ಆರ್. ಪ್ರಾಜೆಕ್ಟ್ನಿಂದ ₹ 85 ಕೋಟಿ ಹೂಡಿಕೆ (350 ಉದ್ಯೋಗ), ಧಾರವಾಡದ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿಯೋಬಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನಿಂದ ₹ 50 ಕೋಟಿ ಹೂಡಿಕೆ (563 ಉದ್ಯೋಗ), ಕೊಪ್ಪಳ ಜಿಲ್ಲೆಯ ಗಬಾರ ಗ್ರಾಮದಲ್ಲಿ ಅಭಯ್ ಆಗ್ರೋ ಫುಡ್ ಪ್ರೈವೇಟ್ ಲಿಮಿಟೆಡ್ನಿಂದ ₹ 32.65 ಕೋಟಿ ಹೂಡಿಕೆ (35 ಉದ್ಯೋಗ).
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.