ADVERTISEMENT

ಕೆಟ್ಟದಾಗಿ ಮಾತಾಡಿದ್ದ ಶಿವರಾಮೇಗೌಡ ದೆಹಲಿಯಲ್ಲಿ ಕ್ಷಮೆ ಕೇಳಿದ್ದರು: ಸುಮಲತಾ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 9:15 IST
Last Updated 29 ಏಪ್ರಿಲ್ 2023, 9:15 IST
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್   

ಭಾರತೀನಗರ: ‘ಮೂರು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌ ಪಕ್ಷದಲ್ಲಿದ್ದಾಗ ನನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದ ಎಲ್‌.ಆರ್‌.ಶಿವರಾಮೇಗೌಡ ಅವರು ದೆಹಲಿಯಲ್ಲಿ ಕ್ಷಮೆ ಯಾಚಿಸಿದ್ದರು’ ಎಂದು ಸಂಸದೆ ಸುಮಲತಾ ಅಂಬರೀಷ್‌ ತಿಳಿಸಿದರು.

ಎಲ್‌.ಆರ್‌.ಶಿವರಾಮೇಗೌಡ ಅವರ ಪತ್ನಿ, ನಾಗಮಂಗಲ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ಪ್ರಚಾರಕ್ಕೆ ತೆರಳಿದ್ದಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನನ್ನು ಭೇಟಿ ಮಾಡಿದ್ದ ಶಿವರಾಮೇಗೌಡ ಅಂದು ನಿಮ್ಮ ಬಗ್ಗೆ ಹಿಯಾಳಿಸಿದ್ದು ನನ್ನ ಸ್ವಂತ ನಿಲುವಿನಿಂದಲ್ಲ. ನಿಮ್ಮ ಬಗ್ಗೆ ಕೆಟ್ಟದಾಗಿ ನಿಂದಿಸಿ ಹೇಳಿಕೆ ನೀಡುವಂತೆ ನನಗೆ ತಾಕೀತು ಮಾಡಿದ್ದರು. ನನ್ನಿಂದ ಅಂಥ ಹೇಳಿಕೆಯನ್ನು ಹೇಳಿಸಿದ್ದು ಎಂದು ತಿಳಿಸಿದ್ದು, ಆ ಬಗ್ಗೆ ನಾನು ಅವರನ್ನು ಕ್ಷಮಿಸಿ ಆಗಿದೆ’ ಎಂದು ಹೇಳಿದರು.

‘ನಾನು ಹಳೆಯದನ್ನು ಮರೆತು ಸುಧಾ ಶಿವರಾಮೇಗೌಡ ಪರ ಪ್ರಚಾರಕ್ಕೆ ತೆರಳಿದ್ದೇನೆ. ನನಗೆ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಮೋದಿಯವರ ಕೈ ಬಲಪಡಿಸುವುದು ಮುಖ್ಯವಾಗಿದೆ’ ಎಂದರು.

ADVERTISEMENT

ಮದ್ದೂರು ಕ್ಷೇತ್ರದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿ, ಮನವಿ ಮಾಡಲಾಗಿದೆ. ಅವರು ಕಾಲಾವಕಾಶ ಕೇಳಿದ್ದಾರೆ. ಬರುವುದು ಅವರ ಇಷ್ಟಕ್ಕೆ ಬಿಟ್ಟಿದ್ದು, ಬಿಜೆಪಿಗೆ ಕರೆತರುವ ಪ್ರಯತ್ನವನ್ನು ಮಾಡಿದ್ದೇವೆ. ಅಭಿಷೇಕ್‌ ಅಂಬರೀಷ್‌ ಚುನಾವಣಾ ಪ್ರಚಾರಕ್ಕೆ ಯಾವಾಗ ಬರುತ್ತಾರೆಂದು ಗೊತ್ತಿಲ್ಲ. ಈ ಬಗ್ಗೆ ಅವನೊಂದಿಗೆ ಮಾತನಾಡಿಲ್ಲ. ಬಿಡುವು ಸಿಕ್ಕಾಗ ಬರಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.