ಬೆಂಗಳೂರು: ದೇಶೀಯ ವಿಮಾನ ಸಂಚಾರ ಸೋಮವಾರದಿಂದ ಆರಂಭವಾಗುತ್ತಿದ್ದಂತೆ, ರಾಜ್ಯದ ವಿಮಾನ ನಿಲ್ದಾಣಗಳು ವೈಮಾನಿಕ ಸೇವೆಗೆ ಸಜ್ಜುಗೊಂಡಿವೆ.
ದೇಶಿಯ ವಿಮಾನಯಾನ ಸಂಚಾರಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದರೂ, ರಾಜ್ಯ ಸರ್ಕಾರವು ವಿಮಾನಯಾನಕ್ಕೆ ಅನುಮತಿ ನೀಡಿದೆ. ಆದರೆ, ಶೇ 33ರಷ್ಟು ಮಾತ್ರ ವಿಮಾನಗಳ ಸಂಚಾರಕ್ಕೆ ಅವಕಾಶವಿದ್ದು, ಪ್ರಯಾಣಿಕರು ಕಾಯ್ದಿರಿಸುವ ಟಿಕೆಟ್ಗಳ ಆಧಾರದ ಮೇಲೆ, ಯಾವ ವಾಯು ಮಾರ್ಗದಲ್ಲಿ ಎಷ್ಟು ವಿಮಾನಗಳು ಹಾರಾಟ ನಡೆಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ನಿಗಮದ ಅಧಿಕಾರಿಗಳು ಹೇಳಿದರು.
ಕೇಂದ್ರ ಸರ್ಕಾರ ಆಂತರಿಕ ವಿಮಾನ ಯಾನಕ್ಕೆ ಸೋಮವಾರದಿಂದ (ಮೇ 25) ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಲಾಕ್ಡೌನ್ ನಿರ್ಬಂಧದ ಅವಧಿಯಲ್ಲಿ ವಿಮಾನ ನಿಲ್ದಾಣದ ಎರಡು ಕಡೆಯ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಪ್ರತಿದಿನ ಸಂಜೆ 7 ಗಂಟೆಯಿಂದ ಮರುದಿನ ಬೆಳಿಗ್ಗೆ 7 ಗಂಟೆವರೆಗೆ ಮತ್ತು ಭಾನುವಾರದ ಕರ್ಫ್ಯೂ ಅವಧಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ವಿಮಾನ ಪ್ರಯಾಣಿಕರಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಎಲ್ಲೆಲ್ಲಿಗೆ ವಿಮಾನ
ಬೆಂಗಳೂರು– ಮಂಗಳೂರು
ಬೆಂಗಳೂರು– ಮೈಸೂರು,
ಬೆಂಗಳೂರು– ಹುಬ್ಬಳ್ಳಿ
ಬೆಂಗಳೂರು– ಬೆಳಗಾವಿ, ಕಲಬುರ್ಗಿ ಮತ್ತು ಬೀದರ್
ನಿಗದಿತ ಸಂಖ್ಯೆಯಷ್ಟು ಟಿಕೆಟ್ ಬುಕ್ಕಿಂಗ್ ಆದರೆ ಮಾತ್ರ ವಿಮಾನ ಹಾರಾಟ ನಡೆಯುತ್ತವೆ. ಸದ್ಯಕ್ಕೆ 7 ವಿಮಾನಗಳು ಹಾರಾಟಕ್ಕೆ ಸಿದ್ಧತೆ ನಡೆಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.