ಬಾಗಲಕೋಟೆ: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭಾನುವಾರ ಮುಂಜಾನೆ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಬಂದು ಸಾಮಾನ್ಯರಂತೆ ಚೀಲ ಹಿಡಿದು ಅಡ್ಡಾಡಿ ತರಕಾರಿ ಕೊಂಡರು. ಇದು ಸ್ಥಳೀಯರನ್ನು ಆಶ್ಚರ್ಯಚಕಿತಗೊಳಿಸಿತು.
ಮನೆದೇವರು ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಸುಧಾಮೂರ್ತಿ ಬಂದಿದ್ದರು. ಶನಿವಾರಸಂಜೆಯೇ ಜಮಖಂಡಿ ನಗರಕ್ಕೆ ಬಂದಿದ್ದ ಅವರು, ಅಲ್ಲಿನ ಕುಂಚನೂರು ರಸ್ತೆಯಕೆಎಚ್ಬಿ ಕಾಲೊನಿ ದಾನಮ್ಮನ ಗುಡಿ ಬಳಿಯ ಸೋದರಳಿಯ (ತಮ್ಮನ ಮಗ) ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ಉಳಿದಿದ್ದರು.
ಮರುದಿನ ಲಕ್ಷ್ಮೀನರಸಿಂಹ ಸ್ವಾಮಿಗೆ ಪೂಜೆ ಮಾಡಿಸಿ, ಅಲ್ಲಿಂದ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು, ಜಾತ್ರೆಯಲ್ಲಿ ಅಡ್ಡಾಡಿ ನಂತರ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳಿದರು.
ಚೌಕಾಶಿ ಮಾಡಲಿಲ್ಲ: ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿ ಅವರ ತವರುಮನೆ. ’ಕೃಷ್ಣಾ ತೀರದಲ್ಲಿಯೇ ಆಡಿ ಬೆಳೆದಿರುವ ಅವರಿಗೆ ಇಲ್ಲಿ ಬೆಳೆಯುವ ತರಕಾರಿ ಅಚ್ಚುಮೆಚ್ಚು. ಇತ್ತ ಬಂದಾಗಲೆಲ್ಲಾ ಕಾಯಿಪಲ್ಲೆ, ಹೂವು, ಬೆಲ್ಲ, ಸಾಂಬಾರು ಪದಾರ್ಥ ಕೊಂಡು ಬೆಂಗಳೂರಿನ ಮನೆಗೆ ಒಯ್ಯುತ್ತಾರೆ’ ಎಂದು ನಾರಾಯಣ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು..
‘ಅತ್ತೆ ಪ್ರತಿ ಬಾರಿ ಜಮಖಂಡಿಗೆ ಬಂದಾಗಲೂ ಅವರಿಗೆ ನಾನೇ ಸಂತೆಯಿಂದ ತರಕಾರಿ ಕೊಂಡು ತರುತ್ತಿದ್ದೆ. ಆದರೆ ಈ ಬಾರಿ ಅವರೂ ನನ್ನೊಂದಿಗೆ ಬಂದರು. ಇತ್ತೀಚೆಗಷ್ಟೇ ಈ ಭಾಗ ಕೃಷ್ಣಾ ನದಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿತ್ತು. ಹಾಗಾಗಿ, ರೈತರ ಸ್ಥಿತಿಗತಿ ಅರಿಯಲು ಸ್ವತಃ ಸಂತೆಗೆ ಬಂದರು. ವ್ಯಾಪಾರಕ್ಕೆ ಕುಳಿತವರನ್ನು ಮಾತಾಡಿಸಿ, ಅವರ ಸಂಕಷ್ಟ ಆಲಿಸುತ್ತಾ ಚೌಕಾಶಿ ಮಾಡದೇ ತರಕಾರಿ ಕೊಂಡು ತಂದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.