ಮೈಸೂರು: ‘ಮಧುಬಲೆ ವೈಯಕ್ತಿಕ ವಿಚಾರ. ಸದನದಲ್ಲಿ ಅಂತಹ ವಿಚಾರಗಳು ಚರ್ಚೆಯಾಗಬಾರದಿತ್ತು’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾರೋ ಕರೆ ಮಾಡುತ್ತಾರೆ. ಯಾರೋ ರಿಸೀವ್ ಮಾಡುತ್ತಾರೆ. ಅದನ್ನು ಮುಂದುವರಿಸಬೇಕಾ ಬೇಡವಾ ಎಂಬುದು ವೈಯುಕ್ತಿಕ ವಿಚಾರ. ಅದರ ಚರ್ಚೆಯಿಂದ ಸಾರ್ವಜನಿಕರಿಗೆ ಏನು ಪ್ರಯೋಜನ? ವೈಯುಕ್ತಿಕವಾದ ವಿಚಾರ, ಜಾತಿ ಹಾಗೂ ಪ್ರಾಂತ್ಯ ವಿಚಾರಗಳನ್ನು ಸದನದಲ್ಲಿ ತರಬಾರದು’ ಎಂದು ಪ್ರಶ್ನಿಸಿದರು.
ಸತೀಶ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ಭೇಟಿ ಕುರಿತು ಪ್ರತಿಕ್ರಿಯಿಸಿ, ‘ರಾಜಕಾರಣದಲ್ಲಿ ಯಾರು ಯಾರನ್ನಾದರೂ ಭೇಟಿಯಾಗಬಹುದು. ರಾಜ್ಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡುವ ಅನಿವಾರ್ಯತೆ ಇರುತ್ತದೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. 140 ಸಂಖ್ಯಾಬಲದ ಮುಂದೆ 19 ಜನ ಏನೂ ಮಾಡಲಿಕ್ಕೆ ಆಗುವುದಿಲ್ಲ’ ಎಂದರು.
‘ಜಾರಕಿಹೊಳಿ ಭೇಟಿ ಅಚ್ಚರಿ ತಂದಿದೆ’
ಮೈಸೂರು: ‘ಸತೀಶ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ಭೇಟಿ ಅಚ್ಚರಿ ತಂದಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು’ ಎಂದು ಶಾಸಕ ಕೆ. ಹರೀಶ್ ಗೌಡ ಪ್ರತಿಕ್ರಿಯಿಸಿದರು.
ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿ ‘ಯತ್ನಾಳ್ ಸದನದಲ್ಲಿ ಮಧುಬಲೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಉಚ್ಚಾಟಿಸಲಾಗಿದೆ. ಅವರು ಪಕ್ಷದ ಶಿಸ್ತು ಪಾಲಿಸುತ್ತಿರಲಿಲ್ಲ. ಸದನದಲ್ಲೂ ಯಾರಿಗೂ ಗೌರವ ಕೊಡುತ್ತಿರಲಿಲ್ಲ. ಇದು ನಮ್ಮಂತಹ ಕಿರಿಯ ಶಾಸಕರಿಗೆ ಪಾಠ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.