ಮೇಲುಕೋಟೆ: ಮೇಲುಕೋಟೆ ಎಸ್ಇಟಿ ಶಾಲೆಯ ಶಿಕ್ಷಕಿ, ಮಾಣಿಕ್ಯನಹಳ್ಳಿಯ ಲೋಕೇಶ್ ಎಂಬವರ ಪತ್ನಿ ದೀಪಿಕಾ (35) ಅವರನ್ನು ಐತಿಹಾಸಿಕ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೊಲೆ ಮಾಡಿ ಹೂತು ಹಾಕಿದ್ದು, ಅವರ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡುತ್ತಿರುವ ವಿಡಿಯೊ ಪೊಲೀಸರಿಗೆ ಸಿಕ್ಕಿದೆ.
ಜ.20ರಂದು ಶಾಲೆಯಿಂದ ಅವರು ವಾಪಸು ಬಾರದೆ, ಕುಟುಂಬ ಸದಸ್ಯರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಮೇಲುಕೋಟೆ ಪೊಲೀಸರಿಗೆ ಬೆಟ್ಟದ ತಪ್ಪಲಲ್ಲಿ ಅವರ ಸ್ಕೂಟರ್ ಪತ್ತೆಯಾಗಿತ್ತು. ನಂತರ, ಅವರನ್ನು ಕೊಲೆ ಮಾಡಿ ಗುಂಡಿ ತೆಗೆದು ಹೂತಿರುವುದು ಬೆಳಕಿಗೆ ಬಂತು. ಮೃತದೇಹವನ್ನು ಹೊರತೆಗೆದು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು.
‘ಕೊಲೆಗೆ ಕಾರಣ ಗೊತ್ತಾಗಿಲ್ಲ. ಇಬ್ಬರು ಕಿಡಿಗೇಡಿಗಳು ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿ ಕಳುಹಿಸಿದ್ದಾರೆ. ದೃಶ್ಯ 10 ಸೆಕೆಂಡ್ ಇದ್ದು ಸಾಕಷ್ಟು ಮಾಹಿತಿ ಸಿಕ್ಕಿದೆ. ಶೀಘ್ರ ಕೊಲೆಗಾರರನ್ನು ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಶ್ರೇಯಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.