ಬೆಂಗಳೂರು/ಉಡುಪಿ:‘ಈಚೆಗೆ ಉಡುಪಿಯ ಕೃಷ್ಣಮಠ ದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಮಾತ ನಾಡಿದ ಕೆಲವು ವಿಚಾರಗಳು ಅನವಶ್ಯಕ ವಿವಾದಗಳಿಗೆ ಎಡೆಮಾಡಿಕೊಡುತ್ತಿರುವ ಕಾರಣ ಹೇಳಿಕೆಗಳನ್ನು ಹಿಂಪಡೆಯುತ್ತಿದ್ದೇನೆ’
ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಸೂರ್ಯ ಹೇಳಿದ್ದು ಏನು?
‘ಯಾವುದೋ ಕಾರಣಕ್ಕೆ ಹಿಂದೂ ಧರ್ಮದಿಂದ ಕ್ರಿಶ್ಚಿಯನ್, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದರೆ ಸಾಲದು. ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನೂ ಹಿಂದೂಗಳಾಗಿ ಪರಿವರ್ತಿಸಬೇಕಾಗಿರುವುದು ಹಿಂದೂಗಳ ಆದ್ಯ ಕರ್ತವ್ಯವಾಗಬೇಕು’ ಎಂದಿದ್ದರು.
‘ಮನೆಯ ಪಕ್ಕದಲ್ಲಿರುವ, ಮೊಹಲ್ಲಾದಲ್ಲಿರುವವರನ್ನು ಹಿಂದೂ ಧರ್ಮಕ್ಕೆ ಕರೆತರುವುದಲ್ಲ; ಅಸಾಧ್ಯವಾದುದನ್ನು ಸಾಧ್ಯವಾಗಿಸುವ ದೊಡ್ಡ ಕನಸುಗಳನ್ನು ಕಾಣಬೇಕು. ಭ್ರಾಂತಿಯಿಂದ ಹೊರಬಂದು ಹಿಂದೂ ಧರ್ಮದ ಪುನರುತ್ಥಾನ ಮಾಡಬೇಕು. ಈ ಮೂಲಕ ಭಾರತ ಪ್ರಪಂಚಕ್ಕೆ ಜಗದ್ಗುರುವಾಗಬೇಕು’ ಎಂದು ಅವರು ಪ್ರತಿಪಾದಿಸಿದ್ದರು.
‘ಹಿಂದೆ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಒತ್ತಡಗಳಿಗೆ ಮಣಿದು ಹಿಂದೂ ಧರ್ಮ ತ್ಯಜಿಸಿದವರನ್ನೆಲ್ಲ ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಪ್ರತಿ ದೇವಸ್ಥಾನ ಹಾಗೂ ಮಠಗಳು ವಾರ್ಷಿಕ ಗುರಿ ಹಾಕಿಕೊಳ್ಳಬೇಕು. ಟಿಪ್ಪು ಜಯಂತಿಯಂದೇ ಹಿಂದೂ ಧರ್ಮಕ್ಕೆ ಕರೆತರುವ ಕೆಲಸ ಆರಂಭವಾಗಬೇಕು’ ಎಂದಿದ್ದರು.
ಬಿಜೆಪಿ ಸರ್ಕಾರ ಇತ್ತೀಚೆಗಷ್ಟೇ ಬೆಳಗಾವಿ ಅಧಿವೇಶನ ದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿ ಸಿತ್ತು. ವಿಧಾನಪರಿಷತ್ತಿನಲ್ಲಿ ಮಸೂದೆ ಮಂಡನೆಯಾಗಿಲ್ಲ. ಯಾರೇ ಆದರೂ ಮತಾಂತರಕ್ಕೆ ಯತ್ನಿಸುವುದು ಅಪರಾಧವಾಗಿದ್ದು, ಅಂತಹವರನ್ನು 10 ವರ್ಷಗಳ ಕಾಲ ಜೈಲಿಗೆ ಹಾಕುವ ಅಂಶವನ್ನೂ ಮಸೂದೆ ಒಳಗೊಂಡಿದೆ. ಇದರ ಬೆನ್ನಲ್ಲೇ ತೇಜಸ್ವಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.