ಆರ್. ಅಶೋಕ
ಬೆಂಗಳೂರು: ಜಾಲಹಳ್ಳಿ ಗ್ರಾಮದ ಸರ್ವೆ ನಂಬರ್ 73ರಲ್ಲಿ ತುಮಕೂರು–ಬಳ್ಳಾರಿ ವರ್ತುಲ ರಸ್ತೆಗೆ ಹೊಂದಿಕೊಂಡಿರುವ, ಮುತ್ಯಾಲಮ್ಮ ದೇವಸ್ಥಾನಕ್ಕೆ ಸೇರಿದ ₹190 ಕೋಟಿ ಮೌಲ್ಯದ 1.32 ಎಕರೆ ಜಮೀನನ್ನು ಖಾಸಗಿ ಸಂಸ್ಥೆಗೆ 20 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿಯ ಮುನಿರತ್ನ ಆರೋಪಿಸಿದರು.
‘ಮೆಟ್ರೊ ಸೇರಿದಂತೆ ಸರ್ಕಾರದ ಯೋಜನೆಗಳಿಗೆ ಅದೇ ಜಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ಅದೇ ಜಾಗವನ್ನು ಯೋಜನೆಗಳಿಗೆ, ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬಹುದಿತ್ತು. ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಿರುವುದರ ಹಿಂದೆ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಸದನದಲ್ಲಿ ಹಿಂದೆ ಈ ವಿಚಾರ ಪ್ರಸ್ತಾಪವಾದಾಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಾಸಗಿಗೆ ಗುತ್ತಿಗೆ ನೀಡುವುದಿಲ್ಲ ಎಂದಿದ್ದರು. ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದು ಹಕ್ಕುಚ್ಯುತಿ ಆಗುವುದಿಲ್ಲವೇ’ ಎಂದು ಆರ್. ಅಶೋಕ ಪ್ರಶ್ನಿಸಿದರು.
ವಾರ್ಷಿಕ ₹20 ಸಾವಿರಕ್ಕೆ ಗುತ್ತಿಗೆ ನೀಡಲಾಗಿತ್ತು. ಆಕ್ಷೇಪ ವ್ಯಕ್ತವಾದ ನಂತರ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ₹2.5 ಕೋಟಿ ನಮೂದಿಸಿ, ಶಿಫಾರಸು ಮಾಡಿದ್ದಾರೆ. ಕೊನೆಗೆ ಇದು ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ಕಡತ ವರ್ಗಾಯಿಸಿ, ಆ ಇಲಾಖೆ ಮೂಲಕ ಖಾಸಗಿಗೆ ಗುತ್ತಿಗೆ ನೀಡಲಾಗಿದೆ. ಈ ವಿಷಯ ಮುಜರಾಯಿ ಸಚಿವರ ಗಮನಕ್ಕೂ ಬಂದಿಲ್ಲ. ದೇವಸ್ಥಾನದ ಜಾಗವನ್ನು ಹೀಗೆ ದುರುಪಯೋಗಪಡಿಸಿಕೊಂಡರೆ ಮುತ್ಯಾಲಮ್ಮನ ಶಾಪ ತಟ್ಟದೇ ಇರದು. ಕೂಡಲೇ ಜಾಗವನ್ನು ಸರ್ಕಾರ ಮರಳಿ ಪಡೆದು, ದೇವಸ್ಥಾನಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.