ಬೆಂಗಳೂರು: ‘ಅಕ್ರಮವಾಗಿ ನೇಮಕಗೊಂಡ ಮತ್ತು ನ್ಯಾಯಸಮ್ಮತವಲ್ಲದ ಸಮಿತಿಯು ಮರುಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು’ ಎಂದು ಎಐಡಿಎಸ್ಒ ಒತ್ತಾಯಿಸಿದೆ.
‘ರಾಜ್ಯ ಸರ್ಕಾರವು ಪಠ್ಯಪುಸ್ತಕಗಳನ್ನು ಮರುಪರಿಷ್ಕರಿಸಲು ನಿಯೋಜಿಸಿದ್ದ ಸಮಿತಿಯೇ ಕಾನೂನುಬಾಹಿರವಾಗಿದೆ. ಸರ್ಕಾರಿ ಆದೇಶವಿಲ್ಲದೆಯೇ, ಕೇವಲ ಶಿಕ್ಷಣ ಸಚಿವರ ಮಾತಿನ ಮೇಲೆ ರಚಿಸಲಾಗಿದೆ. ಈ ಸಮಿತಿಯು ಮರುಪರಿಷ್ಕರಿಸಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಕ್ರಮ ಖಂಡನೀಯ’ ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಜಾತಾಂತ್ರಿಕ ಪ್ರಕ್ರಿಯೆ ಹಾಗೂ ಕನಿಷ್ಠ ಸರ್ಕಾರಿ ನಿಯಮಗಳಿಗೆ ಒಳಪಡದ ಸಮಿತಿಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಯಾವ ನೈತಿಕತೆಯನ್ನೂ ರಾಜ್ಯ ಸರ್ಕಾರವು ಹೊಂದಿಲ್ಲ. ಹಳೆಯ ಸಮಿತಿ ಪ್ರಕಟಿಸಿದ ಪುಸ್ತಕಗಳನ್ನೇ ಈ ವರ್ಷವೂ ಮುಂದುವರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.