ADVERTISEMENT

ಅಂಬೇಡ್ಕರ್, ಕೆಂಪೇಗೌಡರ ಬಗ್ಗೆ ತಿರಸ್ಕಾರ: ರಾಮಚಂದ್ರಪ್ಪ ವಿರುದ್ಧ ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 19:45 IST
Last Updated 8 ಜೂನ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ಕಾಂಗ್ರೆಸ್‌ ನೇತೃತ್ವದ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅಂಬೇಡ್ಕರ್‌ ಪಠ್ಯದ ಬಗ್ಗೆ ತಿರಸ್ಕಾರವಿತ್ತು. ನಾಡಪ್ರಭು ಕೆಂಪೇಗೌಡ ಪಠ್ಯಕ್ಕೆ ಜಾಗ ಇರಲಿಲ್ಲ, ನೇಗಿಲಯೋಗಿ ಪದ್ಯಕ್ಕೆ ಅವಕಾಶ ಇರಲಿಲ್ಲ, ಸಿಂಧೂ ನಾಗರಿಕತೆ ಪಾಠವೇ ಇರಲಿಲ್ಲ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಇವೆಲ್ಲವನ್ನೂ ಕೈಬಿಟ್ಟು ನೆಹರೂ ಇಂದಿರಾಗೆ ಬರೆದ ಪತ್ರವನ್ನು ಅನಾವಶ್ಯಕವಾಗಿ ತುರುಕಿಸಲಾಗಿತ್ತು. ಇದರ ಉದ್ದೇಶವೇನು ಎಂದು ಪ್ರಶ್ನಿಸಿದೆ.

ಬರಗೂರು ಸಮಿತಿ ರಾಮಾಯಣದ ಬಗೆಗಿನ ಪಠ್ಯ ತೆಗೆದು ಇಸ್ಲಾಮಿಕ್‌ ಮತ್ತು ಸೂಫಿ ಪಂಥದ ಪಠ್ಯ ಸೇರಿಸಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ವೈಭವೀಕರಣ ಮಾಡಿದ್ದೂ ಅಲ್ಲದೆ, ಭಾರತದ ಸನಾತನ ಸಂಸ್ಕೃತಿ ಬಗ್ಗೆ ಕೀಳರಿಮೆ ಹುಟ್ಟಿಸುವ ಬರಹ ಸೇರ್ಪಡೆ ಮಾಡಲಾಗಿತ್ತು. ಇವೆಲ್ಲ ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ಸಮಿತಿಯ ಸಾಧನೆ ಎಂದು ಟೀಕಿಸಿದೆ.

ADVERTISEMENT

ಟಿಪ್ಪುವನ್ನು ವೈಭವೀಕರಿಸಿ, ಹೆಚ್ಚಿನ ಪುಟ ಸೇರಿಸಲು ಮೈಸೂರು ಒಡೆಯರ್ ವಂಶಸ್ಥರ ಪಠ್ಯಕ್ಕೆ ಕತ್ತರಿ ಹಾಕಿತ್ತು. ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಮೈಸೂರು ರಾಜಮನೆತನಕ್ಕೆ ಅವಮಾನ ಮಾಡಿದ್ದು ನಿಜವಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.