ಚಂದನ್ ಕುಮಾರ್
ಒಟ್ಟಾವ: ಟೊರಾಂಟೊದ ಶಾಪಿಂಗ್ ಸೆಂಟರ್ನ ವಾಹನ ನಿಲುಗಡೆ ಸ್ಥಳದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ–ಕೆನಡಾ ಪ್ರಜೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಚಂದನ್ ಕುಮಾರ್ ರಾಜ ನಂದಕುಮಾರ್ (37) ಎಂಬುವರು ಮೃತಪಟ್ಟಿದ್ದಾರೆ.
ದಾಳಿಗೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಆದರೆ, ಸಿ.ಸಿ.ಟಿ.ವಿ ದೃಶ್ಯಗಳು ಮತ್ತು ಪ್ರಾಥಮಿಕ ತನಿಖೆ ಆಧರಿಸಿ ಇದೊಂದು ‘ಪೂರ್ವಯೋಜಿತ ಕೃತ್ಯ’ ಎಂದು ಕೆನಡಾ ಪೊಲೀಸರು ಹೇಳಿದ್ದಾರೆ.
ಐಟಿ ವೃತ್ತಿಪರರಾದ ನಂದಕುಮಾರ್, ಗ್ರೇಟರ್ ಟೊರಾಂಟೊ ಪ್ರದೇಶದ ಬ್ರಾಂಪ್ಟನ್ನಲ್ಲಿ ನೆಲಸಿದ್ದರು.
‘ಶನಿವಾರ ಮಧ್ಯಾಹ್ನ 3.31ರ ಸುಮಾರಿಗೆ ಹೆದ್ದಾರಿ 27, ರೆಕ್ಸ್ಡೇಲ್ ಬೊಲೆವಾರ್ಡ್ ಸಮೀಪದ ಶಾಪಿಂಗ್ ಸೆಂಟರ್ ಬಳಿ ಗುಂಡಿನ ದಾಳಿ ನಡೆದಿದೆ ಎಂಬ ತುರ್ತು ಕರೆ ಬಂತು. ಸ್ಥಳಕ್ಕೆ ಧಾವಿಸಿದಾಗ ಗುಂಡು ತಗುಲಿದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಗುಂಡಿನ ದಾಳಿ ನಡೆಸಿದವರು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷ ಟೊರಾಂಟೊದಲ್ಲಿ ನಡೆದಿರುವ ಮೂರನೆಯ ಗುಂಡಿನ ದಾಳಿ ಇದಾಗಿದೆ.
ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದ ಎಸ್ಯುವಿಯ ಮುಂಭಾಗದ ಗಾಜಿಗೆ ಗುಂಡು ಹೊಕ್ಕಿರುವ ರಂಧ್ರಗಳು, ಚಾಲಕನ ಬದಿಯ ಕಿಟಕಿಯ ಗಾಜು ಒಡೆದಿರುವುದು ಪೊಲೀಸರ ಪರಿಶೀಲನೆಯಲ್ಲಿ ಕಂಡುಬಂದಿದೆ.
‘ಶಾಪಿಂಗ್ ಮಾಲ್ನ ವಾಹನ ನಿಲುಗಡೆ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಶಂಕಿತರು ಮನಬಂದಂತೆ ದಾಳಿ ನಡೆಸಿಲ್ಲ. ಇದು ಒಬ್ಬ ವ್ಯಕ್ತಿಯನ್ನು ಕೇಂದ್ರೀಕರಿಸಿ ನಡೆಸಿದ ಪೂರ್ವಯೋಜಿತ ದಾಳಿ ಎನ್ನುವುದು ಗೊತ್ತಾಗಿದೆ. ಎಷ್ಟು ಸುತ್ತು ಗುಂಡು ಹಾರಿಸಿದ್ದಾರೆ ಎನ್ನುವುದೂ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ’ ಎಂದು ಇನ್ಸ್ಪೆಕ್ಟರ್ ಎರೋಲ್ ವಾಟ್ಸನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.