ADVERTISEMENT

ಕಲಬುರಗಿ: ತರಬೇತಿ ವಿಮಾನ ಜಮೀನಿನಲ್ಲಿ ತುರ್ತು ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 11:08 IST
Last Updated 25 ಜೂನ್ 2023, 11:08 IST
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಪೇಟೆ ಸೀರೂರ್ ಗ್ರಾಮದ ಜಮೀನೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದ ತರಬೇತಿ ವಿಮಾನ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಪೇಟೆ ಸೀರೂರ್ ಗ್ರಾಮದ ಜಮೀನೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದ ತರಬೇತಿ ವಿಮಾನ    

ಕಲಬುರಗಿ: ರೆಡ್‌ ಬರ್ಡ್‌ ಏವಿಯೇಷನ್ ಅಕಾಡೆಮಿಯ ತರಬೇತಿ ವಿಮಾನ ಚಿತ್ತಾಪುರ ತಾಲ್ಲೂಕಿನ ಪೇಟೆ ಸೀರೂರ್ ಗ್ರಾಮದ ಜಮೀನೊಂದರಲ್ಲಿ ಭಾನುವಾರ ತುರ್ತು ಭೂಸ್ಪರ್ಶ ಮಾಡಿದೆ.

ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ತುರ್ತಾಗಿ ಇಳಿಯಬೇಕಾಯಿತು. ವಿಮಾನದಲ್ಲಿದ್ದ ಇಬ್ಬರೂ ಸುರಕ್ಷಿತವಾಗಿದ್ದು, ವಿಮಾನಕ್ಕೂ ಹಾನಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಲಬುರಗಿ ವಿಮಾನ ನಿಲ್ದಾಣದಿಂದ ತರಬೇತು ವಿಮಾನವು ಟೇಕಾಫ್ ಆಗಿದ್ದ ಕೆಲವು ನಿಮಿಷಗಳಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚತ್ತ ಪೈಲೆಟ್‌ ವಿಮಾನವನ್ನು ಪೇಟೆ ಸೀರೂರ್ ಗ್ರಾಮದ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಪೈಲೆಟ್‌ ಇನ್‌ಸ್ಟೆಕ್ಟರ್ ಮತ್ತು ತರಬೇತಿ ನಿರತ ಅಭ್ಯರ್ಥಿ ಸುರಕ್ಷಿತವಾಗಿದ್ದಾರೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಡಾ. ಚಿಲಕಾ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರೆಡ್‌ ಬರ್ಡ್‌ ತರಬೇತಿ ವಿಮಾನವು ನಿಲ್ದಾಣದಿಂದ 10 ಕಿ.ಮೀ. ದೂರ ಹೋಗುತ್ತಿದ್ದಂತೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದಾದ 10 ನಿಮಿಷಗಳಲ್ಲಿ ಪೈಲೆಟ್ ಸುರಕ್ಷಿತವಾಗಿ ವಿಮಾನವನ್ನು ಜಮೀನಿನಲ್ಲಿ ಇಳಿಸಿದರು. ತಕ್ಷಣವೇ ನಿಲ್ದಾಣಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಹಾಗೂ ಬೆಂಗಳೂರಿಗೆ ಈ ಬಗ್ಗೆ ತಿಳಿಸಲಾಗಿದೆ. ಅಧಿಕಾರಿಗಳ ತಂಡ ಪರಿಶೀಲನೆಗೆ ಬರಲಿದೆ’ ಎಂದರು.

ಮಾಡಬೂಳ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.