ಬೆಂಗಳೂರು: ‘ಒಂದು ಸಾರಿಗೆ ನಿಗಮದಿಂದ ಇನ್ನೊಂದು ಸಾರಿಗೆನಿಗಮಕ್ಕೆ ಚಾಲಕರು ಮತ್ತು ನಿರ್ವಾಹಕರನ್ನು ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ. ಬದಲಿಗೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮಾದರಿಯಲ್ಲಿನಾಲ್ಕು ನಿಗಮಗಳ ಒಳಗಷ್ಟೇ ವರ್ಗಾವಣೆ ಕೌನ್ಸೆಲಿಂಗ್ ಜಾರಿಗೆ ತರುವ ವಿಚಾರ ಇದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
‘ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ವಿಜಯಪುರ, ಬೆಳಗಾವಿ ಭಾಗದ ಚಾಲಕರು, ನಿರ್ವಾಹಕರನ್ನು ಆ ಭಾಗಕ್ಕೆ ವರ್ಗಾವಣೆ ಮಾಡಬೇಕೆಂದು ಶಾಸಕರು ಒತ್ತಡ ಹೇರುತ್ತಿದ್ದಾರೆ. ಅದಕ್ಕೆ ಮಣಿಯಲುಸಾಧ್ಯವಿಲ್ಲ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಬಿಎಂಟಿಸಿ ಬಸ್ ಚಾಲಕರಿಗೆ ₹ 35 ಸಾವಿರದಿಂದ ₹ 40 ಸಾವಿರದವರೆಗೆ ಸಂಬಳವಿದೆ. ಬೆಳಗಾವಿ, ವಿಜಯಪುರಗಳಲ್ಲಿ ₹ 12 ಸಾವಿರಕ್ಕೇ ಹೊಸಬರನ್ನು ನೇಮಕಾತಿ ಮಾಡುವುದು ಸಾಧ್ಯವಿದೆ. ಅಧಿಕ ವೇತನ ಕೊಟ್ಟು ಸಿಬ್ಬಂದಿ ವರ್ಗಾವಣೆ ಮಾಡಿಸಿಕೊಳ್ಳುವುದು ಬೇಡ ಎಂದು ಇತರ ನಿಗಮದವರು ಹೇಳುತ್ತಿದ್ದಾರೆ. ಇಂತಹ ಹಲವು ಸಮಸ್ಯೆಗಳು ಇರುವುದರಿಂದ ಅಂತರ ನಿಗಮ ವರ್ಗಾವಣೆ ಮಾಡದೆ ಇರಲು ನಿರ್ಧರಿಸಲಾಗಿದೆ’ ಎಂದರು.
‘ಕೆಎಸ್ಆರ್ಟಿಸಿಯಲ್ಲಿ ದಾವಣಗೆರೆಯವರು ಮಂಗಳೂರಿಗೆ ಹೋಗಲು ಒಪ್ಪುವುದಿಲ್ಲ, ಇಂತಹ ಸಮಸ್ಯೆಗೆ ಪರಿಹಾರವನ್ನು ನಿಗಮದೊಳಗೆಯೇ ಕಂಡುಕೊಳ್ಳಬೇಕಷ್ಟೇ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.