
ಸುವರ್ಣ ವಿಧಾನಸೌಧ (ಬೆಳಗಾವಿ): ಪ್ರಾದೇಶಿಕ ವಿಮಾನಯಾನ ಸೇವೆಗೆ ಉಡಾನ್ ಯೋಜನೆ ಮೂಲಕ ನೀಡುತ್ತಿರುವ ಆರ್ಥಿಕ ನೆರವನ್ನು 10 ವರ್ಷಗಳವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಕಲಬುರಗಿಯಲ್ಲಿ ವಿಮಾನ ಹಾರಾಟ ಸ್ಥಗಿತ ಕುರಿತಂತೆ ಬಿಜೆಪಿಯ ಶಶೀಲ್ ನಮೋಶಿ ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ‘ದೇಶದ ವಿಮಾನಯಾನ ಕ್ಷೇತ್ರದಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ. ಈ ಯೊಜನೆಯಡಿ ಮೂರು ವರ್ಷ ಮಾತ್ರ ಪ್ರಾದೇಶಿಕ ವಿಮಾನಯಾನದ ಅಭಿವೃದ್ಧಿ, ಪುನಶ್ಚೇತನಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ. ಇದನ್ನು 10 ವರ್ಷಕ್ಕೆ ವಿಸ್ತರಿಸಿ, ಐದು ವರ್ಷ ಪೂರ್ತಿ ನಿಲ್ದಾಣಗಳ ಅಭಿವೃದ್ಧಿಗೆ ನೆರವು ಒದಗಿಸಬೇಕು. ಉಳಿದ ಐದು ವರ್ಷದ ಅವಧಿಗೆ ರಾಜ್ಯ ಸರ್ಕಾರ ಶೇ 50ರ ಅನುಪಾತದಲ್ಲಿ ಅನುದಾನ ಒದಗಿಸಲು ಸಿದ್ಧವಿದೆ’ ಎಂದು ಹೇಳಿದರು.
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಕಲಬುರಗಿ ವಿಮಾನನಿಲ್ದಾಣ 2022ರಿಂದ ಕಾರ್ಯಾಚರಣೆ ಆರಂಭಗೊಂಡಿತ್ತು. ವಿಮಾನಯಾನ ಸಂಸ್ಥೆಗಳು ಕೇಂದ್ರದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಉಡಾನ್ ಯೋಜನೆಯಡಿ ಒಪ್ಪಂದ ಮಾಡಿಕೊಂಡಿವೆ. ಅದರಂತೆ ಮೂರು ವರ್ಷ ಸೇವೆ ಒದಗಿಸಿವೆ. ಅವಧಿ ಪೂರ್ಣಗೊಂಡ ಕಾರಣ ಸೇವೆ ಸ್ಥಗಿತಗೊಳಿಸಿವೆ. ಅವಧಿ ವಿಸ್ತರಿಸದಿದ್ದರೆ ಉಡಾನ್ ಯೋಜನೆಯಡಿ ವಿಮಾನಯಾನ ಸೌಲಭ್ಯ ಪಡೆದ ನಿಲ್ದಾಣಗಳು ಬಂದ್ ಆಗಲಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.