ADVERTISEMENT

ರಾಜಕೀಯ ನಿವೃತ್ತಿಯತ್ತ ಅನರ್ಹ ಶಾಸಕರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
.
.   

ಪುಸ್ತಕದಲ್ಲಿ ಬರೆಯುವೆ

ವಿಧಾನಸಭಾ ಅಧ್ಯಕ್ಷರಕಾರ್ಯ ವೈಖರಿ ಬಗ್ಗೆ ನಾನು ಬರೆಯುವ ಪುಸ್ತಕದಲ್ಲಿ ಉಲ್ಲೇಖಿಸುತ್ತೇನೆ.
ಒತ್ತಡಕ್ಕೆ ಮಣಿದವರಂತೆ ರಮೇಶ್ ಕುಮಾರ್ ವರ್ತಿಸಿದ್ದಾರೆ. ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿ ತಮಗೆ ಸ್ಪೀಕರ್ ಸ್ಥಾನ ನೀಡಿದ್ದಕ್ಕೆ ಋಣ ಸಂದಾಯ ಮಾಡಿದ್ದಾರೆ. ಅವರೇ ಹೇಳಿಕೊಂಡಂತೆ ಕ್ಷಣಕ್ಕೊಮ್ಮೆ ಬದಲಾಗುತ್ತಾರೆ. ನಮ್ಮ ವಿಚಾರದಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ. ಸಭಾಧ್ಯಕ್ಷರಿಂದ ಈ ರೀತಿ ವರ್ತನೆ ನಿರೀಕ್ಷಿಸಿರಲಿಲ್ಲ. ಉತ್ತಮ ಸ್ಪೀಕರ್ ರೀತಿಯಲ್ಲಿ ವರ್ತಿಸಿಲ್ಲ. ಸದನದಲ್ಲಿ ಅವರ ನಡವಳಿಕೆಯೂ ಉತ್ತಮವಾಗಿರಲಿಲ್ಲ. ರಾಜ್ಯದ ಜನರು ಅವರನ್ನು ಕ್ಷಮಿಸುವುದಿಲ್ಲ.

ಎಚ್.ವಿಶ್ವನಾಥ್

ADVERTISEMENT

ರಾಜಕೀಯ ನಿವೃತ್ತಿ

ಕಾಂಗ್ರೆಸ್ ನಾಯಕರೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣಕರ್ತರು. ಆ ನಾಯಕರೇ ವಿಧಾನಸಭೆಯಲ್ಲಿ ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತಿರುವಂತೆ ಗೋಸುಂಬೆತನ ತೋರಿದ್ದಾರೆ.ನಮ್ಮನ್ನು ಬೆದರಿಸುವ ರೀತಿಯಲ್ಲಿ ಮಾತನಾಡಿದ್ದು, ಚುನಾವಣೆ ರಣರಂಗದಲ್ಲಿ ಭೇಟಿಯಾಗುವುದಾಗಿ ಹೇಳಿದ್ದಾರೆ. ಅಲ್ಲೇ ಸ್ವಾಗತಿಸುತ್ತೇವೆ. ಸದ್ಯದಲ್ಲೇ ಕ್ಷೇತ್ರದ ಜನರ ಸಭೆ ಕರೆದು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಕೃಷ್ಣ ಬೈರೇಗೌಡ ಅವರೇನೂ ಸಾಚಾ ಅಲ್ಲ. ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಎಚ್.ಡಿ.ದೇವೇಗೌಡ ಮಾತಿನಂತೆ ಲೋಕಸಭೆಯಿಂದ ಸ್ಪರ್ಧಿಸಿ ಸೋತಿದ್ದಾರೆ.

ಎಸ್.ಟಿ.ಸೋಮಶೇಖರ್

ನಿವೃತ್ತಿಗೆ ಚಿಂತನೆ

ನಿವೃತ್ತಿಯ ಚಿಂತನೆ ನಡೆಸಿದ್ದೇನೆ. ನನ್ನ ಮಗ ರಾಜಕೀಯಕ್ಕೆ ಬರುವುದು ಅವನಿಗೆ ಬಿಟ್ಟ ವಿಷಯ. ಯಾವ ಪಕ್ಷ ಸೇರಬೇಕು ಎಂಬುದನ್ನು ಮಗನೇ ತೀರ್ಮಾನ ಮಾಡುತ್ತಾನೆ. ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಹಣದ ಆಸೆಗೆ ಪಕ್ಷಾಂತರ ಮಾಡಿಲ್ಲ. ಪ್ರತಿ ವರ್ಷ ₹20 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ವಸತಿ ಸಚಿವನಾಗಿದ್ದಾಗ ನಿರಾಶ್ರಿತರಿಗೆ 2 ಲಕ್ಷ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿದರೂ ಅನುಮತಿ ಸಿಗಲಿಲ್ಲ. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಂದಿಸದೆಹಾರಿಕೆಯ ಉತ್ತರ ನೀಡಿದರು. ಜಿಲ್ಲೆಯ ಕೆಲವು ಅಧಿಕಾರಿಗಳ ವರ್ಗಾವಣೆಗೂ ಸ್ಪಂದಿಸಲಿಲ್ಲ. ಡಿ.ಕೆ.ಶಿವಕುಮಾರ್‌ ಅವರಿಂದ ನಾನೇನೂ ರಾಜಕೀಯವಾಗಿ ಬೆಳೆದಿಲ್ಲ.

ಎಂ.ಟಿ.ಬಿ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.