ADVERTISEMENT

ಮಾತು ತಪ್ಪಿದ ಸೋಮಣ್ಣ ರಾಜೀನಾಮೆ ನೀಡಲಿ: ಕೆ.ಸಿ.ಗಂಗಾಧರ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 13:48 IST
Last Updated 3 ಜುಲೈ 2021, 13:48 IST

ಬೆಂಗಳೂರು: ‘ವಸತಿ ಹೀನರಿಗೆ 30 ಸಾವಿರ ಮನೆಗಳನ್ನು ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದ ಸಚಿವ ವಿ.ಸೋಮಣ್ಣ ಈಗ ಮಾತು ತಪ್ಪಿದ್ದಾರೆ. ಅವರು ಕೂಡಲೇ ರಾಜೀನಾಮೆ ನೀಡಲಿ’ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಾಧ್ಯಕ್ಷ ಕೆ.ಸಿ.ಗಂಗಾಧರ್‌ ಒತ್ತಾಯಿಸಿದ್ದಾರೆ.

‘ವಸತಿ ವಂಚಿತರಿಗೆ ಮನೆಗಳನ್ನು ಹಂಚಿಕೆ ಮಾಡದೆ ಹೋದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದ ಸೋಮಣ್ಣ, ಬಸವೇಶ್ವರರ ಮೇಲೆ ಪ್ರಮಾಣ ಕೂಡ ಮಾಡಿದ್ದರು. ಆ ಮಾತಿನಂತೆ ಅವರು ನಡೆದುಕೊಂಡಿಲ್ಲ. ವಚನ ಭ್ರಷ್ಟರಾಗಿರುವ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡವರಿಗೆ ದಿನಸಿ ಕಿಟ್‌ ವಿತರಣೆ ಹಾಗೂ ಕೋವಿಡ್‌ ಲಸಿಕೆ ನೀಡಿಕೆಯಲ್ಲೂ ಅವರು ರಾಜಕೀಯ ಮಾಡಿದ್ದಾರೆ. ಕೇವಲ ಬಿಜೆಪಿಯವರಿಗೆ ಆದ್ಯತೆ ನೀಡಿರುವುದು ಸರಿಯಲ್ಲ. ಶಾಸಕರೇ ಹೀಗೆ ಮಾಡಿದರೆ ಕ್ಷೇತ್ರದ ಇತರ ನಾಗರಿಕರು ಏನು ಮಾಡಬೇಕು. ಇಂತಹ ರಾಜಕೀಯ ಹಗೆತನ ತೋರಬಾರದು. ಈಗಲಾದರೂ ಎಚ್ಚೆತ್ತುಕೊಂಡು ಸ್ವಂತ ಸೂರಿಲ್ಲದವರಿಗೆ ಮನೆ ಒದಗಿಸುವ ಕೆಲಸ ಮಾಡಬೇಕು. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.