ಬೆಂಗಳೂರು: ‘ವಕೀಲಿ ವೃತ್ತಿಯ ಆನಂದವೇ ಬೇರೆ. ಸುದೀರ್ಘ ರಾಜಕಾರಣದಿಂದಾಗಿ ಇಷ್ಟು ದಿನ ಅದನ್ನು ಮೊಟಕುಗೊಳಿಸಿದ್ದೆ. ಈಗ ಮುಂದುವರಿಸುತ್ತಿದ್ದೇನೆ...’
ಇದು ಕಾಂಗ್ರೆಸ್ನ ಹಿರಿಯ ಮುಖಂಡ, ಸಾಹಿತಿ ಮತ್ತು ವಕೀಲರೂ ಆದ ಎಂ. ವೀರಪ್ಪ ಮೊಯಿಲಿ ಅವರ ಮಾತು.
ಸೋಮವಾರ ಬೆಳಗ್ಗೆ 11.15ರ ವೇಳೆಗೆ ಕರಿ ಕೋಟು, ಗೌನು ತೊಟ್ಟು ಹೈಕೋರ್ಟ್ಗೆ ಬಂದ ಮೊಯಿಲಿ ಅವರು ತಮ್ಮ ದೀರ್ಘಕಾಲದ ಆಪ್ತರೂ ಆದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಡಿ.ಎಲ್.ಎನ್.ರಾವ್ ಮತ್ತು ರವೀಂದ್ರನಾಥ ಕಾಮತ್ ಅವರೊಂದಿಗೆ ವಕೀಲರ ಸಭಾಂಗಣದಲ್ಲಿ ಕುಳಿತು ಕಾಲ ಕಳೆದರು. ಕಾರಿಡಾರಿನಲ್ಲಿ ಸುತ್ತಾಡಿ ತಮ್ಮ ಪರಿಚಯಸ್ಥ ವಕೀಲರ ಜೊತೆ ಹರಟೆ ಹೊಡೆದರು.
79 ವರ್ಷದ ಮೊಯಿಲಿ ಅವರು, ಮುಖ್ಯಮಂತ್ರಿಯಾಗಿ, ಕೇಂದ್ರ ಸರ್ಕಾರದಲ್ಲಿ ಕಾನೂನು ಸೇರಿದಂತೆ ವಿವಿಧ ಖಾತೆಗಳ ಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದೀಗ ತಮ್ಮ ‘ಮೊಯಿಲಿ ಲಾ ಅಸೋಸಿಯೇಟ್ಸ್’ ಕಚೇರಿಗೆ ಹೊಸ ಹುರುಪು ತುಂಬಿದ್ದು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳಲ್ಲಿ ವಕೀಲಿ ವೃತ್ತಿ ಮುಂದುವರಿಸಲು ನಿರ್ಧರಿಸಿದ್ದಾರೆ.
‘ವೃತ್ತಿಯ ಜೊತೆ ರಾಜಕಾರಣವನ್ನೂ ಮುಂದುವರಿಸುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.