ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಆಶಯಗಳಿಗೆ ಧಕ್ಕೆ ಬರತೊಡಗಿದೆ ಎಂಬ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಅವರ ಟೀಕೆಗೆ ಸ್ವತಃ ಪಕ್ಷದ ನಾಯಕರೇ ಗರಂ ಆದ ಪ್ರಸಂಗ ವಿಧಾನ ಪರಿಷತ್ನಲ್ಲಿ ನಡೆಯಿತು.
ಮಂಗಳವಾರ ಸಂವಿಧಾನ ಮೇಲೆ ಚರ್ಚೆ ನಡೆಯುತ್ತಿದ್ದಾಗ ಐವನ್ ಅವರು ವಿಷಯ ಮಂಡಿಸಿದರು. ‘ಪ್ರಜಾವಾಣಿ’ ಮತ್ತು ‘ಇಂಡಿಯಾ ಟುಡೆ’ಗಳಲ್ಲಿ ಬಂದ ವರದಿಗಳನ್ನು ಉಲ್ಲೇಖಿಸಿದ ಅವರು, ಪ್ರಜಾಪ್ರಭುತ್ವದ ಮೌಲ್ಯ ದೇಶದಲ್ಲಿ ಕುಸಿಯುತ್ತಿರುವುದನ್ನು ಬೊಟ್ಟುಮಾಡಿ ತೋರಿಸಿದರು. ತೆಲಂಗಾಣದಲ್ಲಿ ಪ್ರತ್ಯೇಕ ದೇಶದ ಕೂಗು ಕೇಳಿಸಿರುವುದು, ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ಅವರು ಉಲ್ಲೇಖಿಸಿದರು.
ಅಸ್ಸಾಂನಲ್ಲಿ 18 ಲಕ್ಷ ಮಂದಿ ಬಂಧನದಲ್ಲಿದ್ದಾರೆ ಎಂದು ಐವನ್ ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಆಗ ಕೆರಳಿ ಕೆಂಡವಾದರು. ‘ಅಸ್ಸಾಂನಲ್ಲಿ ಬಂಧನದಲ್ಲಿರುವ ಒಬ್ಬನ ಹೆಸರು ಹೇಳಿದರೆ ನನ್ನ ಶಾಸಕ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡುತ್ತೇನೆ’ ಎಂದು ಬಿಜೆಪಿಯ ಎನ್.ರವಿಕುಮಾರ್ ಸವಾಲು ಎಸೆದರು. ಐವನ್ ಅವರನ್ನು ಸಮರ್ಥಿಸುವಲ್ಲಿ ವಿಫಲರಾದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮತ್ತು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ವಿಷಯ ಬಿಟ್ಟು ಐವನ್ ಮಾತನಾಡಿದ್ದು ತಪ್ಪು, ದೇಶ ಅಖಂಡವಾಗಿದ್ದು, ಅದರ ಬಗ್ಗೆ ಹೇಳಿಕೆ ನೀಡಬಾರದಿತ್ತು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.