ಬೆಂಗಳೂರು: ಸರ್ಕಾರದ ಸವಲತ್ತುಗಳು ಫಲಾನುಭವಿಗಳನ್ನು ಸರಿಯಾಗಿ ತಲುಪುತ್ತಲೇ ಇಲ್ಲ, ತಲುಪಿದ್ದರೆ ಮುಖ್ಯಮಂತ್ರಿ ಅವರ ಮನೆ ಮುಂದೆ ಪ್ರತಿದಿನ ನೂರಾರು ಜನ ಬಂದು ಮನವಿ ಸಲ್ಲಿಸುತ್ತಿರಲಿಲ್ಲ ಎಂದು ಬಿಜೆಪಿ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಹೇಳಿದರು.
ವಿಧಾನ ಪರಿಷತ್ನಲ್ಲಿ ಬುಧವಾರ ಸಂವಿಧಾನ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸರ್ಕಾರಿ ಇಲಾಖೆಗಳು ಎಷ್ಟು ಜಡ್ಡುಗಟ್ಟಿ ಹೋಗಿವೆ ಎಂದರೆ ಶಾಸಕರೇ ಹತ್ತತ್ತು ಬಾರಿ ಹೋದರೂ ಕೆಲಸ ಆಗದ ಸ್ಥಿತಿ ಇದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಾಫಿಯಾದಿಂದಾಗಿ ಎಲ್ಲಾ ಯೋಜನೆಗಳೂ ಹಳ್ಳ ಹಿಡಿಯುತ್ತಿವೆ’ ಎಂದರು.
‘ಚುನಾವಣಾ ವ್ಯವಸ್ಥೆಯೇ ಭ್ರಷ್ಟವಾಗಿರುವುದು ಎಲ್ಲಾ ಸಮಸ್ಯೆಗಳ ಮೂಲ’ ಎಂದ ಅವರು, ಸಂವಿಧಾನ ಕುರಿತು 10ನೇ ತರಗತಿಗೆ ಕನಿಷ್ಠ 50 ಅಂಕಗಳ ಪಠ್ಯ ಅಳವಡಿಸಬೇಕು ಎಂದು ಒತ್ತಾಯಿಸಿದರು.
ವಚನ ಹರಿಸಿದ ಮೀಸಲಾತಿ: ‘ಮೀಸಲಾತಿ ಪದ್ಧತಿಗೆ ನಮ್ಮ ವಿರೋಧ ಇಲ್ಲ, ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತಹ ಸ್ಥಿತಿ ಇದೆ’ ಎಂದು ನಾರಾಯಣಸ್ವಾಮಿ ಹೇಳಿದಾಗ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬಸವಣ್ಣನ ವಚನ ಉದ್ಧರಿಸಿ, ಮೀಸಲಾತಿಯ ನಿಜ ಉದ್ದೇಶ 70 ವರ್ಷವಾದ ಬಳಿಕವೂ ಈಡೇರಿಲ್ಲ ಎಂದರು. ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಬಿಜೆಪಿಯ ಆಯನೂರು ಮಂಜುನಾಥ್ ಅವರಿಂದಲೂ ವಚನಗಳು ಉಲ್ಲೇಖಗೊಂಡು, ಮೀಸಲಾತಿ ವ್ಯವಸ್ಥೆಗೆ ಸಮರ್ಥನೆ ದೊರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.