ಮಂಗಳೂರು: ದೇಸಿ ಜ್ಞಾನಗಳನ್ನು ಉಳಿಸಿ–ಬೆಳೆಸಲು ಗೋಕರ್ಣದ ಅಶೋಕೆಯಲ್ಲಿ ರಾಮಚಂದ್ರಾಪುರ ಮಠವು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಲಿದ್ದು, ಏಪ್ರಿಲ್ 26ರಂದು ಲೋಕಾರ್ಪಣೆಗೊಳ್ಳಲಿದೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, 12 ನಿಕಾಯ, 80 ವಿಭಾಗ ಹಾಗೂ 280 ವಿದ್ಯೆಗಳನ್ನು ಕಲಿಸಲಾಗುವುದು. ಪ್ರಮಾಣ ಪತ್ರ, ಬೋಧಕರು, ಕೋರ್ಸ್ ಮತ್ತಿತರ ಸ್ವರೂಪಗಳ ಕುರಿತು ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ 100 ವಿದ್ಯಾರ್ಥಿಗಳಿಂದ ಶುರು ಮಾಡಲಿದ್ದು, 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಲಿಸುವ ಗುರಿ ಇದೆ’ ಎಂದು ವಿವರಿಸಿದರು.
‘ಪ್ರವೇಶಕ್ಕೆ ಪರೀಕ್ಷೆ ಇದೆಯೇ ಹೊರತು, ಯಾವುದೇ ಜಾತಿ, ಲಿಂಗ ಅಥವಾ ಇತರ ತಾರತಮ್ಯಗಳಿಲ್ಲ’ ಎಂದರು.
ಮೌಢ್ಯ ಯಾವುದು ಎಂದು ತೀರ್ಮಾನ ಆಗಲಿ: ‘ಮೌಢ್ಯ ಯಾವುದು? ಎಂಬ ತೀರ್ಮಾನ ಆಗಬೇಕು. ಆ ಬಳಿಕ ನಿಷೇಧ ಮಾಡಬಹುದು. ನಮಗೆ ಗೊತ್ತಿಲ್ಲದೇ ಇರುವುದೆಲ್ಲವೂ ಮೌಢ್ಯವಲ್ಲ. ಅದರ, ಹಿಂದೆ ವಿಜ್ಞಾನವೂ ಇರಬಹುದು. ಅದಕ್ಕಾಗಿ ಯಾವುದೇ ವಿಚಾರಗಳ ಬಗ್ಗೆ ಸಂಶೋಧನೆ– ಅಧ್ಯಯನ ಮಾಡಿ. ಅದು, ತಾತ್ವಿಕ ವಿಚಾರ ಹೌದೋ, ಅಲ್ಲವೋ ಎಂಬುದು ಸಾಬೀತಾದ ಬಳಿಕ ನಿರ್ಧಾರ ಮಾಡಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.