ADVERTISEMENT

ಸ್ವಾರ್ಥಗಳನ್ನು ಬದಿಗಿಟ್ಟು ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕಿದೆ: ರಾಜ್ಯಪಾಲರು

ಭಾರತ ಮಾತಾ ಕೀ ಜೈ ಘೋಷಣೆ ಕೂಗಿಸಿದ ರಾಜ್ಯಪಾಲರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 9:13 IST
Last Updated 12 ಮಾರ್ಚ್ 2021, 9:13 IST
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ   

ಚಿಕ್ಕಬಳ್ಳಾಪುರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಭಾಷಣ ಆರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲ ಮೂರು ಬಾರಿ ಭಾರತ ಮಾತಾ ಕೀ ಜೈ ಘೋಷಣೆಯನ್ನು ಸಭಿಕರಿಂದ ಮೊಳಗಿಸಿದರು.

ಈ ಅಮೃತ ಮಹೋತ್ಸವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸಬೇಕಾಗಿದೆ. ಎಲ್ಲರೂ ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಎಂದು ಅವರೂ ಘೋಷಣೆ ಕೂಗಿದರು. ನೀವು ಸಣ್ಣ ಧ್ವನಿಯಲ್ಲಿ ಘೋಷಣೆ ಕೂಗಿದ್ದೀರಿ. ದೇಶಕ್ಕಾಗಿ ದೊಡ್ಡ ಧ್ವನಿಯಲ್ಲಿ ಭಾರತ ಮಾತಾ ಕೀ ಜೈ ಎಂದು ಹೇಳಿ ಎಂದು ನೆರೆದಿದ್ದವರನ್ನು ಉದ್ದೀಪಿಸಿದರು‌. ಅವರೂ ಜೋರು ಧ್ವನಿಯಲ್ಲಿ ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.

ಮಾತೃಶಕ್ತಿ ನಮ್ಮ ದೇಶದ ಶಕ್ತಿ. ಕೃಷ್ಣ ಭಗವಾನರ ಬದುಕಿನಲ್ಲಿ ಮಾತಾ ಯಶೋಧಮತ್ತು ಗಾಂಧಿ ಅವರ ಬದುಕಿಗೆ ಪುತಲೀ ಬಾಯಿ, ಶಿವಾಜಿಗೆ ಜೀಜಾಬಾಯಿ ಮಹತ್ವದ ಪಾತ್ರವಹಿಸಿದರು. ಈ ಮಾತೆಯರು ಇವರನ್ನು ಮಹತ್ಮರನ್ನಾಗಿರೂಪಿಸಿದರು. ಮಹಿಳೆಯರಲ್ಲಿ ಅಪಾರ ಶಕ್ತಿ ಬುದ್ಧಿ ಇದೆ ಎಂದು ಹೇಳಿದರು.

ADVERTISEMENT

ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಹಲವು ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ರಾಷ್ಟ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡರು ಎಂದು ಹೇಳಿದರು.

ಭಗತ್ ಸಿಂಗ್ ಅವರನ್ನು ನೇಣಿಗೆ ಹಾಕುವ ಸಂದರ್ಭದಲ್ಲಿ ಬ್ರಿಟಿಷರು ಕೇಳುತ್ತಾರೆ ನಿನ್ನ ಅಂತಿಮ ಆಸೆ ಏನು ಎಂದು. ಆಗ ಭಗತ್ ಸಿಂಗ್ ಬೇಗ ನನ್ನ ನೇಣಿಗೆ ಹಾಕಿ ಅದೇ ನನ್ನ ಆಸೆ ಎನ್ನುವರು. ಆಗ ಬ್ರಿಟಿಷರ ಏಕೆ ಈ ಆಸೆ ಎಂದು ಕೇಳಿದಾಗ ನಾನು ಸತ್ತು ಮತ್ತೆ ಈ ಭರತ ಭೂಮಿಯಲ್ಲಿ ಹುಟ್ಟಿ ಬಂದು ನಿಮ್ಮ ವಿರುದ್ಧ ಹೋರಾಡುವೆ ಎಂದರು. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಇಚ್ಛಾಶಕ್ತಿ ಎಂದರು.

ಪ್ರತಿ‌ ನಾಗರಿಕರು, ವಿದ್ಯಾರ್ಥಿಗಳು ಈ ದೇಶಕ್ಕೆ ಯಾವ ರೀತಿಯಲ್ಲಿ ಸೇವೆ ಮಾಡುತ್ತೇವೆ ಎನ್ನುವ ಸಂಕಲ್ಪವನ್ನು ಮಾಡಬೇಕಿದೆ. ಭಾರತದ ಪ್ರತಿ ನಾಗರಿಕರು ಬುದ್ದಿವಂತರಿದ್ದಾರೆ. ಅವಕಾಶಗಳು ದೊರೆಯಬೇಕಿದೆ.

ನಮಗಾಗಿ ಯೋಧರು ಕೊರೆಯುವ ಚಳಿಯಲ್ಲಿ ಕೆಲಸ ಮಾಡುವರು. ನಾವು ಹವಾ ನಿಯಂತ್ರಿತ ಕೊಠಡಿಯಲ್ಲಿ ಇದ್ದರೂ ಕೆಲಸ ಮಾಡುವುದಿಲ್ಲ. ಇಂತಹ ಮನಸ್ಥಿತಿ ನಮ್ಮಲ್ಲಿಇದೆ. ಈ ಮನೋಭಾವ ತೊರೆದು ವಿಶ್ವದಲ್ಲಿ ಭಾರತ ಮೊದಲ ಸ್ಥಾನ ಪಡೆಯುವ ದಿಕ್ಕಿನಲ್ಲಿ ನಾವು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಆಲೋಚಿಸಬೇಕಿದೆ. ಆಲೋಚಿಸಿ ಆ ದಿಕ್ಕಿನಲ್ಲಿ ಮುನ್ನಡೆಯಬೇಕಿದೆ ಎಂದರು.

32 ಮಂದಿ ವಿದುರಾಶ್ವತ್ಥದ ಈ ನೆಲದಲ್ಲಿ ಹುತಾತ್ಮರಾದರು. ರಾಷ್ಟ್ರಕ್ಕಾಗಿ ಇವರು ಬಲಿದಾನಗೈದಿದ್ದು ಇದನ್ನು ಮರೆಯಬಾರದು. ಸ್ವಾರ್ಥಗಳನ್ನು ಬದಿಗಿಟ್ಟು ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕಿದೆ. ನಮ್ಮಲ್ಲಿ ಎಷ್ಟೇ ಹಣವಿದ್ದರೂ ವ್ಯಕ್ತಿತ್ವ ಇಲ್ಲದಿದ್ದರೆ ಹಣ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ.

ನಮ್ಮ ಶಕ್ತಿ, ಸಂಪನ್ಮೂಲವನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ರಾಜ್ಯಪಾಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.