ಬೆಳಗಾವಿಯ ಸುವರ್ಣ ವಿಧಾನಸೌಧ
–ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ
ಸುವರ್ಣ ವಿಧಾನಸೌಧ (ಬೆಳಗಾವಿ): ಸೋಮವಾರ ಬೆಳಿಗ್ಗೆ 10.40ಕ್ಕೆ ಆರಂಭವಾದ ವಿಧಾನಸಭೆ ಕಲಾಪ ತಡರಾತ್ರಿ ತಡರಾತ್ರಿರವರೆಗೂ ನಡೆಯಿತು.
ರಾತ್ರಿ 1 ಗಂಟೆ ಬಳಿಕವೂ ಮುಂದುವರಿದಿತ್ತು.
ರಾತ್ರಿ 12.25ಕ್ಕೆ ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಸ್ಥಾನಮಾನ ಆರಂಭಿಸಿದ ಕಾಂಗ್ರೆಸ್ ಸದಸ್ಯ ಅಶೋಕ್ ರೈ, 'ಸೊಲ್ಮೆಲು' ಎಂದೇ ತುಳು ಭಾಷೆಯಲ್ಲಿ ಮಾತು ಆರಂಭಿಸಿದರು.
ಸಚಿವರಾದ ಕೃಷ್ಣ ಬೈರೇಗೌಡ, ಸತೀಶ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಡಾ.ಎಂ.ಸಿ. ಸುಧಾಕರ್ ಸದನದಲ್ಲಿ ಹಾಜರಿದ್ದು, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ರಾತ್ರಿ 11 ಗಂಟೆಯಾಗುತ್ತಿದ್ದಂತೆ ಸಚಿವ ಕೃಷಬೈರೇಗೌಡ ಅವರು, 'ಸಭಾಧ್ಯಕ್ಷರೇ ಬೆಳಿಗ್ಗೆಯವರೆಗೂ ಕಲಾಪ ನಡೆಸೋಣ. ನಿಮ್ಮ ಅವಧಿಯಲ್ಲಿ ದಾಖಲೆ ನಿರ್ಮಾಣವಾಗಲಿ' ಎಂದರು.
'ನಾನು ಸಿದ್ದನಿದ್ದೇನೆ' ಎಂದು ನಗುತ್ತಲೇ ಹೇಳಿದ ಸಭಾಧ್ಯಕ್ಷ ಯು..ಟಿ. ಖಾದರ್ ಕಲಾಪ ಮುಂದುವರಿಸಿದರು.
ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರು ಶಿಕ್ಷಕರ ಕೊರತೆ ಕುರಿತು 11.50ಕ್ಕೆ ಗಮನ ಸೆಳೆದರು. ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಶಿಕ್ಷಕರನ್ನು ಒದಗಿಸುವಂತೆ ಮನವಿ ಮಾಡಿದರು.
ನಂತರ ತೊಗರಿ ಬೆಳೆ ಹಾನಿ ಕುರಿತು ಗಮನ ಸೆಳೆದ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ಪಾಟೀಲ, ಬೆಳೆಹಾನಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.
ಕೃಷ್ಣನಾಯ್ಕ, ನಾರಾ ಭರತ್ ರೆಡ್ಡಿ, ಶರಣಗೌಡ ಕಂದಕೂರ, ಎನ್.ಎಚ್. ಕೋನರಡ್ಡಿ ಸದನದಲ್ಲಿ ಹಾಜರಿದ್ದು ಪ್ರಶ್ನೆ ಕೇಳಿ, ಉತ್ತರ ಪಡೆದರು. ಕಾಂಗ್ರೆಸ್ ಸದಸ್ಯ ಎ.ಆರ್. ಕೃಷ್ಣಮೂರ್ತಿ ಅವರು ತಡರಾತ್ರಿ 1 ಗಂಟೆಗೆ ಗಮನ ಸೆಳೆಯುವ ಸೂಚನೆ ಮಂಡಿಸಿ ಉತ್ತರ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.