ಬೆಂಗಳೂರು: ರಾಷ್ಟ್ರ ಧ್ವಜದ ಮಹತ್ವ ಮತ್ತು ಇತಿಹಾಸ ತಿಳಿಯದೇ ಕೇಸರಿ ಧ್ವಜವನ್ನೇ ರಾಷ್ಟ್ರಧ್ವಜ ಮಾಡಲು ಹೊರಟಿರುವ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಅವರ ಮೇಲೆ ಪೊಲೀಸರು ದೇಶದ್ರೋಹದಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಮುಖಂಡ
ಎಚ್.ಸಿ. ಮಹದೇವಪ್ಪ ಆಗ್ರಹಿಸಿದ್ದಾರೆ.
‘ಮುಂದಿನ ಐವತ್ತು–ನೂರು ವರ್ಷಗಳಲ್ಲಿ ಕೇಸರಿ ಧ್ವಜ ರಾಷ್ಟ್ರ ಧ್ವಜವಾಗಬಹುದು’ ಎಂದು ಈಶ್ವರಪ್ಪ ಬುಧವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಹದೇವಪ್ಪ,ಸಂವಿಧಾನ ಬದ್ಧವಾದ ರಾಷ್ಟ್ರೀಯ ಚಿಹ್ನೆಗಳನ್ನು ಅಗೌರವದಿಂದ ಕಾಣುತ್ತಿರುವ
ಅವರ ವಿರುದ್ಧ ವಿಧಾನಸಭಾಅಧ್ಯಕ್ಷರು ಸದನದ ಒಳಗೆ ಕಠಿಣ ಕ್ರಮ ಜರುಗಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣೆ ಹತ್ತಿರ ಬಂದರೆ ಬಿಜೆಪಿಗರಿಗೆ ದೇಶವೂ ಮುಖ್ಯವಲ್ಲ, ಜನರೂ ಮುಖ್ಯವಲ್ಲ ಎಂಬಂತಾಗಿದೆ. ಇವರೊಳಗೆ ಸದಾ ಒಬ್ಬ ದೇಶದ್ರೋಹಿ ಅಡಗಿರುತ್ತಾನೆ ಎನ್ನುವುದಕ್ಕೆ ಈಶ್ವರಪ್ಪನವರ ಈ ಮಾತುಗಳೇ ಸಾಕ್ಷಿಯಾಗಿವೆ.ಸಂವಿಧಾನಕ್ಕೆ ದುರುದ್ದೇಶ
ಪೂರ್ವಕವಾಗಿಯೇ ಅಗೌರವ ಸೂಚಿಸುವ ಇಂತಹ ವ್ಯಕ್ತಿಗಳು ಜನ ಪ್ರತಿನಿಧಿ ಸ್ಥಾನದಲ್ಲಿರುವುದು ನಮ್ಮ ಪ್ರಜಾಪ್ರಭುತ್ವದ ದುರ್ದೈವ ಎಂದು ಅವರು ಹೇಳಿದ್ದಾರೆ.
‘ನಮ್ಮ ಸ್ವತಂತ್ರ ದೇಶದ ಸಮಗ್ರತೆ ಮತ್ತು ಐಕ್ಯತೆಯ ಸಂಕೇತವಾಗಿರುವ ರಾಷ್ಟ್ರ ಧ್ವಜದ ಅವಹೇಳನ, ಅಗೌರವ ಮತ್ತು ಅಪ ನಂಬಿಕೆಯು ರಾಷ್ಟ್ರ ದ್ರೋಹ’ ಎಂದು ಅವರು ಪ್ರತಿಪಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.