ಬೆಂಗಳೂರು: ಎಲೆಮರೆಯ ಕಾಯಿಗಳಂತೆ ಇದ್ದುಕೊಂಡು ತಮ್ಮದೇ ಆದ ರೀತಿಯೊಳಗೆ ಸಾಧನೆ ಮಾಡಿದ 22 ಸಾಧಕರನ್ನು ಗುರುತಿಸಿರುವ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡಿದೆ.
ಕ್ರೀಡೆ, ಕಲೆ, ಸಾಹಿತ್ಯ, ಸಾಮಾಜಿಕ ಸೇವೆ, ಸಿನಿಮಾ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಈ ಸಾಧಕರನ್ನುನಗರದಲ್ಲಿ ಶನಿವಾರ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಏರ್ಪಡಿಸಿದ್ದ ‘ಡಿಎಚ್ ಚೇಂಜ್ ಮೇಕರ್ಸ್’ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಅವರ ಸಾಧನೆಯ ಕುರಿತಾಗಿ 8 ಪುಟಗಳ ವಿಶೇಷ ಸಂಚಿಕೆಯನ್ನೂ ತರಲಾಗಿತ್ತು. ಈ ಆಯ್ಕೆಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಧಕರಿಗೆ ಚಲನಚಿತ್ರ ನಟ ಕಿಶೋರ್ ಹಾಗೂ ಗಾಯಕಿ ಎಂ.ಡಿ. ಪಲ್ಲವಿ ಅವರು ಅಭಿನಂದನಾ ಪತ್ರಗಳನ್ನು ವಿತರಿಸಿ, ಶುಭ ಹಾರೈಸಿದರು. ಚಿಟ್ಟೆ ಉದ್ಯಾನವನ್ನು ನಿರ್ಮಿಸಿರುವ ದಕ್ಷಿಣ ಕನ್ನಡದ ಸಮ್ಮಿಲನ ಶೆಟ್ಟಿ ಅವರು ‘ಜನಪ್ರಿಯ ಆಯ್ಕೆ’ ಗೌರವಕ್ಕೆ ಭಾಜನರಾದರು. ಅವರಿಗೆ ಕಲಾವಿದೆ ಅರುಂಧತಿ ನಾಗ್ ಪ್ರಶಸ್ತಿ ಪ್ರದಾನ ಮಾಡಿದರು.
ವಾಸ್ತುಶಿಲ್ಪಿಗಳಾದ ಶ್ರೀದೇವಿ ಚಂಗಲಿ ಮತ್ತು ರೋಸಿ ಪೌಲ್ (ಬೆಂಗಳೂರು), ಕ್ರಿಕೆಟಿಗ ದೇವದತ್ ಪಡಿಕ್ಕಲ್ (ಬೆಂಗಳೂರು), ನವೋದ್ಯಮಿ ರೋಹನ್ ಗಣಪತಿ (ಬೆಂಗಳೂರು), ಕೊಳಲು ವಾದಕರಾದ ಹೇರಂಬಾ ಮತ್ತು ಹೇಮಂತ (ಕೊಡಗು), ಪರಿಸರಪ್ರೇಮಿ ಸಮ್ಮಿನಲ್ ಶೆಟ್ಟಿ (ದಕ್ಷಿಣ ಕನ್ನಡ), ವಿಜ್ಞಾನಿ ಸಮ್ಯಕ್ ಶಾ (ವಿಜಯಪುರ), ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಜಿ.ಎಂ.ರಾಜೇಶ್ ಬಾಬು (ಬೆಂಗಳೂರು), ಹೋರಾಟಗಾರ ಚೇತನ್ ಅಹಿಂಸಾ (ಬೆಂಗಳೂರು), ಮಕ್ಕಳ ಹಕ್ಕು ಹೋರಾಟಗಾರ್ತಿ ಜಿ.ಕೆ.ಶೈಲಜಾ (ಬಾಗಲಕೋಟೆ), ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಜಾಧವ್ (ಬೆಳಗಾವಿ), ಸಿನಿಮಾ ನಿರ್ದೇಶಕ ಡಿ.ಸತ್ಯ ಪ್ರಕಾಶ್, ಪರಿಸರ ವಿಭಾಗದಲ್ಲಿ ಎ.ಪಿ.ಸಿ ಅಭಿಜಿತ್ (ಮೈಸೂರು) ಅವರನ್ನು ಗೌರವಿಸಲಾಯಿತು.
ಸಾಹಿತ್ಯ ವಿಭಾಗದಲ್ಲಿ ರಾಜೇಂದ್ರ ಪ್ರಸಾದ್ (ಮಂಡ್ಯ), ಕಲಾವಿದೆ ಸುಧಾ ಮುತ್ತಲ್ (ಕೊಪ್ಪಳ), ಪರ್ವತಾರೋಹಿ ನಂದಿತಾ ನಾಗನಗೌಡರ (ಹುಬ್ಬಳ್ಳಿ), ಸಾಹಿತಿ ರೋಷನ್ ಅಲಿ, ಶಿಕ್ಷಣ ವಿಭಾಗದಲ್ಲಿ ವೈ.ವಿದ್ಯಾ, ಸಂಗೀತ ವಿಭಾಗದಲ್ಲಿ ರಮಣ ಬಾಲಚಂದ್ರನ್, ಸಮಾಜ ಸೇವಕ ಕೆ.ಬಾಲಕೃಷ್ಣ (ದಕ್ಷಿಣ ಕನ್ನಡ) ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಶ್ರಾವಣಿ ಪವಾರ್ (ಧಾರವಾಡ) ಅವರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.