ADVERTISEMENT

ಝೀರೊ ಟ್ರಾಫಿಕ್: ನಾಲ್ಕೂವರೆ ಗಂಟೇಲಿ ಮಂಗಳೂರಿಂದ ಬೆಂಗಳೂರಿಗೆ ಬಂತು ಆಂಬುಲೆನ್ಸ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 3:00 IST
Last Updated 10 ಫೆಬ್ರುವರಿ 2020, 3:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 40 ದಿನದ ಮಗುವನ್ನು ಮಂಗಳೂ
ರಿನಿಂದ ಬೆಂಗಳೂರಿಗೆ 4.30 ಗಂಟೆಯಲ್ಲಿಯೇ ಝೀರೊ ಟ್ರಾಫಿಕ್ ವ್ಯವಸ್ಥೆ ಮೂಲಕ ಕರೆದೊಯ್ಯಲಾಗಿದೆ. ಮಂಗಳೂರಿನ ಫಾದರ್‌ ಮುಲ್ಲರ್ ಆಸ್ಪತ್ರೆಯಿಂದ ಗುರುವಾರ ಮಧ್ಯಾಹ್ನ 12:05ಕ್ಕೆ ಹೊರಟ ಆಂಬುಲೆನ್ಸ್ ಸಂಜೆ 4.35ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿದೆ.

ಬೆಳ್ತಂಗಡಿಯ ಬಳಂಜದ ಮುಹಮ್ಮದ್ ಹನೀಫ್‌ ಆಂಬುಲೆನ್ಸ್ ಚಲಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದಾರಿ ಮಾಡಿಕೊಟ್ಟ ಸಾರ್ವಜನಿಕರಿಗೆ ಕೃತಜ್ಞತೆ ಹೇಳುತ್ತೇನೆ. ನೆಲಮಂಗಲದ ಬಳಿಕ ಟ್ರಾಫಿಕ್ ಉಂಟಾಗಿ ಸ್ವಲ್ಪ ಸಮಯ ತೆಗೆದುಕೊಂಡಿತು’ ಎಂದು ತಿಳಿಸಿದರು.

‘9 ತಿಂಗಳ ಹಿಂದೆ ಬೆಂಗಳೂರಿನಿಂದ ಕಲ್ಲಿಕೋಟೆಗೆ ಕೇವಲ 4 ಗಂಟೆ 10 ನಿಮಿಷದಲ್ಲಿ 380 ಕಿ.ಮೀ. ಕ್ರಮಿ
ಸಿದ್ದೆ. ಆಗಲೂ ‘ಝೀರೋ ಟ್ರಾಫಿಕ್’ ಪ್ರಯೋಜನಕ್ಕೆ ಬಂದಿತ್ತು. ಬುಧವಾರ ಸಂಜೆ 6 ಗಂಟೆಗೆ ನನಗೆ ಮಾಹಿತಿ ನೀಡಿದ್ದರು. ರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂಗಳೂರು ತಲುಪಿದ್ದೆ. ಇಲ್ಲಿಂದ ಮಧ್ಯಾಹ್ನ12.05ಕ್ಕೆ ಮಗು, ತಂದೆ, ತಾಯಿ ಮತ್ತು ಸಂಬಂಧಿಕರನ್ನು ಕರೆದುಕೊಂಡು ಹೋಗಿದ್ದೆವು. ಆಮ್ಲಜನಕ (ಆಕ್ಸಿಜನ್) ಬದಲಾಯಿಸಲು ದಾರಿ ಮಧ್ಯೆ 10 ನಿಮಿಷ ನಿಲ್ಲಿಸಬೇಕಾಗಿ ಬಂತು’ ಎಂದರು.

ADVERTISEMENT

‘ತುರ್ತಾಗಿ ಚಿಕಿತ್ಸೆಗೆ ಮಗುವನ್ನು ಕರೆದೊಯ್ಯಬೇಕು ಎಂದು ವೈದ್ಯರು ಹೇಳಿದ್ದರು. ಆಗ ನಾವು, ಬಳಂಜದ ಹನೀಫ್ ಅವರನ್ನು ಸಂಪರ್ಕಿಸಿದೆವು. ಎಲ್ಲರೂ ಸಹಕರಿಸಿದರು’ ಎಂದು ಮಗುವಿನ ಹತ್ತಿರದ ಸಂಬಂಧಿ ಸಲೀಂ ಕೃತಜ್ಞತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.