ಢಾಕಾ: ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರ ಕೃತಿಗಳನ್ನು ಪುಸ್ತಕ ಮೇಳದಲ್ಲಿ ಮಾರಾಟಕ್ಕಿಟ್ಟಿದ್ದ ಮಳಿಗೆಯೊಂದರ ಮೇಲೆ ಪ್ರತಿಭಟನಕಾರರ ಗುಂಪೊಂದು ನಡೆಸಿದ್ದ ದಾಳಿ ಕುರಿತಂತೆ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ತನಿಖೆಗೆ ಆದೇಶಿಸಿದ್ದಾರೆ.
ಸಬ್ಯಸಾಚಿ ಪ್ರಕಾಶನವು ‘ಅಮರ್ ಏಕುಶೆ ಪುಸ್ತಕ ಮೇಳ’ದಲ್ಲಿ ತಸ್ಲೀಮಾ ಅವರ ಕೃತಿಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಇದನ್ನು ವಿರೋಧಿಸಿ ‘ತೌಹಿದಿ ಜನತಾ’ ಸಂಘಟನೆಯ ಕಾರ್ಯಕರ್ತರು ಮೇಳಕ್ಕೆ ನುಗ್ಗಿ, ದಾಂದಲೆ ನಡೆಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಬಾಂಗ್ಲಾದೇಶದ ‘ಬಿಡಿನ್ಯೂಸ್24’ ವರದಿ ಮಾಡಿದೆ. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
‘ಬಾಂಗ್ಲಾ ಅಕಾಡೆಮಿ’ಯು ಘಟನೆ ಕುರಿತಂತೆ ತನಿಖೆ ನಡೆಸಲು ಏಳು ಸದಸ್ಯರ ಸಮಿತಿಯನ್ನು ರಚಿಸಿದ್ದು, ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.