ನವದೆಹಲಿ: ಈರುಳ್ಳಿ ಮೇಲಿನ ರಫ್ತು ನಿಷೇಧವು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಅಡುಗೆ ಮನೆಯಲ್ಲಿಯೂ ಪ್ರಭಾವ ಬೀರಿದೆ.
‘ನೀವು ಈರುಳ್ಳಿಯ ರಫ್ತು ಮೇಲೆ ಯಾವ ಕಾರಣಕ್ಕೆ ನಿಷೇಧ ಹೇರಿದ್ದೀರಿ ಎನ್ನುವುದು ನನಗೆ ಗೊತ್ತಿಲ್ಲ. ದಿಢೀರನೆ ನಿಷೇಧ ಜಾರಿಗೆ ಬಂದಿರುವುದರಿಂದ ಅಡುಗೆ ತಯಾರಿಸುವಾಗ ಈರುಳ್ಳಿ ಬಳಸದಿರಲು ನಾನು ನನ್ನ ಬಾಣಸಿಗನಿಗೆ ಸೂಚಿಸಿದ್ದೇನೆ’ ಎಂದು ಹಸೀನಾ ಅವರು ಲಘುಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ನಾವು (ಬಾಂಗ್ಲಾದೇಶಿಗರು) ಈರುಳ್ಳಿಗಾಗಿ ಭಾರತವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದೇವೆ. ಹೀಗಾಗಿ ನಿಷೇಧ ಹೇರುವ ಮುನ್ನ ಮುಂಚಿತವಾಗಿ ಸೂಚನೆ ನೀಡಿದರೆ ನಮಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೇಳಿದ್ದಾರೆ. ಇಲ್ಲಿ ಶುಕ್ರವಾರ ನಡೆದ ಭಾರತ– ಬಾಂಗ್ಲಾದೇಶ ವಾಣಿಜ್ಯ ವೇದಿಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.