ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ನೇಹದ ಸಂಕೇತವಾಗಿ ‘ಹರಿಭಾಂಗ’ ತಳಿಯ 2,600 ಕೆ.ಜಿ ಮಾವಿನ ಹಣ್ಣು ಉಡುಗೊರೆ ನೀಡಿದ್ದಾರೆ.
260 ಪೆಟ್ಟಿಗೆ ಮಾವಿನ ಹಣ್ಣು ಹೊತ್ತ ಟ್ರಕ್ ಭಾನುವಾರ ಜೆಸ್ಸೋರ್ನ ಬೆನಾಪೋಲ್ ಮೂಲಕ ಭಾರತ ಗಡಿ ದಾಟಿದೆ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.
ಈ ಮಾವಿನ ಹಣ್ಣುಗಳು ಉಭಯ ದೇಶಗಳ ನಡುವಣ ಸ್ನೇಹದ ಸಂಕೇತವಾಗಿವೆ ಎಂದು ಬೆನಾಪೋಲ್ ಕಸ್ಟಮ್ಸ್ ಹೌಸ್ನ ಡಿಸಿ ಅನುಪಮ್ ಚಕ್ಮಾ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
‘ಹರಿಭಾಂಗ’ ತಳಿಯ ಈ ಮಾವಿನ ಹಣ್ಣುಗಳನ್ನು ರಂಗ್ಪುರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂದು ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ ಕಚೇರಿಯ ಕಾರ್ಯದರ್ಶಿ (ರಾಜಕೀಯ) ಮೊಹಮ್ಮದ್ ಸ್ಯಾಮಿಯುಲ್ ಖಾದರ್ ಮಾವಿನ ಹಣ್ಣುಗಳನ್ನು ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಆನೇಕ ರಾಜಕೀಯ ಮುಖಂಡರಿಗೂ ಮಾವಿನ ಹಣ್ಣುಗಳನ್ನು ಬಾಂಗ್ಲಾದೇಶ ಕಳುಹಿಸಿಕೊಟ್ಟಿದೆ ಎಂದು ‘ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ್’ ವರದಿ ಮಾಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿಗಳಾದ ಜಿಯಾ ಉಲ್ ಹಕ್ ಮತ್ತು ಪರ್ವೇಜ್ ಮುಷರಫ್ ಸಹ ಈ ಹಿಂದೆ ಭಾರತಕ್ಕೆ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.