ಮಾಸ್ಕೊ: ಉಕ್ರೇನ್ನ ಮಾರಿಯುಪೋಲ್ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆ ಇಂದು ಬೆಳಗ್ಗೆ ಕದನ ವಿರಾಮ ಘೋಷಿಸಿದೆ. ಈ ಮೂಲಕ ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ನಾಗರಿಕರು ನಗರದಿಂದ ಹೊರ ಹೋಗಲು ಸೇನೆ ಅವಕಾಶ ಮಾಡಿಕೊಟ್ಟಿದೆ.
ಭಾರತೀಯ ಕಾಲಮಾನ ಮಧ್ಯಾಹ್, 2.30ರಿಂದ ಈ ಎರಡೂ ನಗರಗಳಲ್ಲಿ ನಾಗರಿಕರನ್ನು ಸ್ಥಳಾಂತರ ಮಾಡಲು ಅವಕಾಶ ಕಲ್ಪಿಸಲಾಗಿದೆ.ಆದರೆ, ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆ ವ್ಯಾಪಕವಾಗಿ ಮುಂದುವರಿಯಲಿದೆ ಎಂದೂ ರಷ್ಯಾದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಮಾರಿಯುಪೋಲ್ ಮತ್ತು ವೋಲ್ನೊವೋಖಾ ಪ್ರದೇಶದಲ್ಲಿ ಕದನ ವಿರಾಮ ಘೋಷಣೆ ಮಾಡಲಾಯಿತು. ಪರಿಹಾರ ಕಾರ್ಯ ಕೈಗೊಳ್ಳಲು ‘ಮಾನವೀಯ ಕಾರಿಡಾರ್’ ತೆರಯಲಾಗಿದೆ. ಈ ಮೂಲಕ ನಾಗರಿಕರು ಈ ನಗರಗಳನ್ನು ತೊರೆಯಲು ಅವಕಾಶ ನೀಡಲಾಗಿದೆ ಎಂದು ರಷ್ಯಾ ಸೇನೆ ತಿಳಿಸಿದೆ.
ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುವ ಮಾರಿಯುಪೋಲ್ ಮೇಲೆ ರಷ್ಯಾ ಕೆಲವು ದಿನಗಳಿಂದ ನಿರಂತರ ದಾಳಿ ಕೈಗೊಂಡಿತ್ತು. ನಗರಕ್ಕೆ ನೀರು, ವಿದ್ಯುತ್ ಕಡಿತಗೊಂಡು, ಜನ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ, ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್ ಮೇಯರ್ ಆಗ್ರಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.