ADVERTISEMENT

ಗಡಿ ಸಂಘರ್ಷಕ್ಕೆ ಮುನ್ನ ಸಮರ ಕಲೆ ಪರಿಣಿತರನ್ನು ಗಡಿಭಾಗಕ್ಕೆ ಕಳಿಸಿತ್ತು ಚೀನಾ

ಏಜೆನ್ಸೀಸ್
Published 28 ಜೂನ್ 2020, 8:07 IST
Last Updated 28 ಜೂನ್ 2020, 8:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ವಾರಗಳ ಹಿಂದೆಲಡಾಖ್ ಸಮೀಪ ನಡೆದ ಹಿಂಸಾತ್ಮಕ ಘರ್ಷಣೆಗೆ ಮುನ್ನ ಚೀನಾ ಸಮರ ಕಲೆ ಪರಿಣಿತರನ್ನು ಮತ್ತು ಪರ್ವತಾರೋಹಿಗಳನ್ನು ಭಾರತದ ಗಡಿಭಾಗಕ್ಕೆಕಳುಹಿಸಿತ್ತು ಎಂದು ಚೀನಾ ಪತ್ರಿಕೆ ವರದಿ ಮಾಡಿದೆ.

ಜೂನ್ 15 ರಂದು ಲಾಸಾದಲ್ಲಿ ಮೌಂಟ್ ಎವರೆಸ್ಟ್ ಒಲಿಂಪಿಕ್ ಟಾರ್ಚ್ ರಿಲೇ ತಂಡದ ಮಾಜಿ ಸದಸ್ಯರು ಮತ್ತು ಮಿಶ್ರ ಸಮರ ಕಲೆಗಳ ಕ್ಲಬ್‌ನ ಪರಿಣಿತರು ಸೇರಿದಂತೆ ಐದು ಹೊಸ ಮಿಲಿಟರಿ ವಿಭಾಗಗಳು ಪರಿಶೀಲನೆಗಾಗಿ ಹಾಜರಾಗಿದ್ದವು ಎಂದುಅಧಿಕೃತ ಮಿಲಿಟರಿ ಪತ್ರಿಕೆ ಚೀನಾ ನ್ಯಾಷನಲ್ ಡಿಫೆನ್ಸ್ ನ್ಯೂಸ್ ವರದಿ ಮಾಡಿದೆ.

ಟಿಬೆಟಿಯನ್ ರಾಜಧಾನಿಯಲ್ಲಿ ನೂರಾರು ಹೊಸ ಯೋಧರುಸಾಲುಗಟ್ಟಿ ನಿಂತಿರುವ ಸಿಸಿಟಿವಿ ದೃಶ್ಯಗಳನ್ನು ಅಲ್ಲಿನ ಮಾಧ್ಯಮವು ಪ್ರಸಾರ ಮಾಡಿದೆ.

ADVERTISEMENT

ಎನ್ಬೊ ಫೈಟ್ ಕ್ಲಬ್ ನೇಮಕಾತಿಗಳು ಅವರ ಸೇನೆಯ ಸಂಘಟನೆ ಮತ್ತು ಸನ್ನದ್ದು ಸ್ಥಿತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ತ್ವರಿತ ಪ್ರತಿಕ್ರಿಯೆ ಮತ್ತು ಬೆಂಬಲ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಟಿಬೆಟ್ ಕಮಾಂಡರ್ ವಾಂಗ್ ಹೈಜಿಯಾಂಗ್ ತಿಳಿಸಿರುವುದಾಗಿ ಚೀನಾ ನ್ಯಾಷನಲ್ ಡಿಫೆನ್ಸ್ ನ್ಯೂಸ್ ವರದಿ ಮಾಡಿದೆ. ಆದರೆ ಇಂತಹ ಉದ್ವಿಗ್ನಪರಿಸ್ಥಿತಿಯಲ್ಲಿ ಈ ನಿಯೋಜನೆಯು ಯಾಕಾಗಿ ನಡೆಯುತ್ತಿದೆ ಎಂದು ಸ್ಪಷ್ಟವಾಗಿ ದೃಢೀಕರಿಸಿಲ್ಲ.

ಲಡಾಖ್ ಪ್ರದೇಶದಲ್ಲಿನ ವಾಸ್ತವ ಗಡಿ ರೇಖೆ ಬಳಿಯಲ್ಲಿಎರಡು ದೇಶಗಳ ನಡುವೆ ದಶಕಗಳಲ್ಲಿಯೇ ಇದೇ ಮೊದಲ ಬಾರಿಗೆ ಅತ್ಯಂತ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಚೀನಾದಲ್ಲೂ ಸಾವು ನೋವುಗಳು ಸಂಭವಿಸಿವೆ ಎಂದು ವರದಿಗಳಲ್ಲಿ ಹೇಳಲಾಗಿದೆ.

ಈ ವಿಚಾರವಾಗಿ ಉಭಯ ದೇಶಗಳು ಪರಸ್ಪರ ದೂಷಿಸುತ್ತಿವೆ. ಸ್ಪರ್ಧಾತ್ಮಕ ಹಿಮಾಲಯದ ಗಡಿ ಪ್ರದೇಶದಲ್ಲಿ ಸೈನ್ಯವನ್ನು ಬಲಪಡಿಸಿರುವುದಾಗಿ ಗುರುವಾರ ಭಾರತ ತಿಳಿಸಿದ್ದು, ಇದು ಚೀನಾ ಗಡಿಯಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಸಮವಿರುವುದಾಗಿ ಹೇಳಿದೆ.

ಇತ್ತೀಚಿನ ವಾರಗಳಲ್ಲಿ ಭಾರತದ ಗಡಿಯಲ್ಲಿರುವ ಟಿಬೆಟ್ ಪ್ರದೇಶದಲ್ಲಿ ಚೀನಾದ ಎತ್ತರದ ವಿಮಾನ ವಿರೋಧಿ ಡ್ರಿಲ್‌ಗಳು ಸೇರಿದಂತೆ ಮಿಲಿಟರಿ ಚಟುವಟಿಕೆಯನ್ನು ಚೀನಾದ ಸ್ಥಳೀಯ ಮಾಧ್ಯಮಗಳು ಎತ್ತಿ ತೋರಿಸಿದೆ.

ಈ ಮಧ್ಯೆ ವಾಸ್ತವ ಗಡಿ ರೇಖೆಯನ್ನು ಎರಡು ಬಾರಿ ದಾಟುವ ಮೂಲಕ ಭಾರತೀಯ ಸೈನಿಕರು ನಮ್ಮ ಯೋಧರನ್ನು ಕೆರಳಿಸಿದ್ದಾರೆ ಎಂದು ಚೀನಾ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.