ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ: ಮಧ್ಯವರ್ತಿಯ ಗಡಿಪಾರಿಗೆ ದುಬೈ ಕೋರ್ಟ್ ಆದೇಶ

ಭಾರತಕ್ಕೆ ಬೇಕಾಗಿದ್ದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌

ಏಜೆನ್ಸೀಸ್
Published 19 ಸೆಪ್ಟೆಂಬರ್ 2018, 4:45 IST
Last Updated 19 ಸೆಪ್ಟೆಂಬರ್ 2018, 4:45 IST
   

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ ಭಾರತಕ್ಕೆ ಬೇಕಾಗಿರುವ ಬ್ರಿಟನ್‌ನ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ಗಡಿಪಾರಿಗೆ ದುಬೈನ ನ್ಯಾಯಾಲಯ ಆದೇಶಿಸಿದೆ.

ಮೈಕೆಲ್‌ನನ್ನು ಕಳೆದ ವರ್ಷ ಯುಎಎಇಯಲ್ಲಿ ಬಂಧಿಸಲಾಗಿದ್ದು, ಗಡೀಪಾರು ವಿಚಾರಣೆ ನಡೆಸಲಾಗುತ್ತಿತ್ತು.

ಇಟಲಿ ಮೂಲದ ಫಿನ್‌ಮೆಕನಿಕಾದ ಬ್ರಿಟನ್‌ನ ಅಂಗಸಂಸ್ಥೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಗಣ್ಯರ ಸಂಚಾರಕ್ಕೆಂದು 12 'ಎಡಬ್ಲ್ಯೂ-101' ಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದಕ್ಕೆ 2007ರಲ್ಲಿ ಸಹಿ ಭಾರತ ಸಹಿ ಹಾಕಿತ್ತು. ನಂತರ ಈ ಒಪ್ಪಂದದಲ್ಲಿ ₹3,227 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಒಪ್ಪಂದ ಕುದುರಿಸುವ ಸಲುವಾಗಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಪಾವತಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ನಂತರ 2014ರ ಜನವರಿಯಲ್ಲಿ ಕೇಂದ್ರ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು.

ಹಗರಣಕ್ಕೆ ಸಂಬಂಧಿಸಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಸೇರಿದಂತೆ 72 ಜನರನ್ನು ಬಂಧಿಸಲಾಗಿತ್ತು.

ಹಗರಣದ ಪ್ರಮುಖ ಮಧ್ಯವರ್ತಿಯಾಗಿರುವ ಕಾರ್ಲೊ ಗೆರೊಸಾ ಅವರನ್ನು ಭಾರತಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಇತ್ತೀಚೆಗಷ್ಟೇ ಇಟಲಿ ಸರ್ಕಾರ ಹೇಳಿತ್ತು. ಸಿಬಿಐ ಆಗ್ರಹದ ಮೇರೆಗೆ ಇಂಟರ್‍‍ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ ನಂತರ ಇಟಲಿ ಸರ್ಕಾರ ಕಳೆದ ಅಕ್ಟೋಬರ್‍‍ನಲ್ಲಿ ಗೊರೊಸಾ ಅವರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT